ಕಬಂಧ ಬಾಹುಗಳ ಆಚೆ ಈಚೆಯ
ನನ್ನ ತುಮುಲಗಳೊಳಗೆ ಹೆಣೆದುಕೊಂಡು,
ನನ್ನೊಳಗೆ ಪ್ರಶ್ನಿಸುತ್ತಿದೇನೆ..ಅವರಂತಾಗಲೇ?

ರಾಮನ ಸ್ಪರ್ಶಕ್ಕೆ ಶಿಲೆ ಬಲೆ ಹರಿದುದಷ್ಟೇ,
ಹದಿಬದೆಯಾದರೂ ಅಹಲ್ಯೆ ಹೆಣ್ಣಾಗಲಿಲ್ಲ.

ಸತ್ಯಕ್ಕಾಗಿ ಸಂತೆಯಲಿ ಬಿಕರಿಗೊಂಡರು,
ಚಂದ್ರಮತಿಯ ಅಸ್ಮಿತೆ ಮಣ್ಣಾಗಲಿಲ್ಲ.

ಅಗಸನ ಮಾತಿಗೆ ರಾಮನ ನೀತಿಗೆ
ಅಗ್ನಿ ಪ್ರವೇಶಿಸಿದರು,
ಸೀತೆ ಬೂದಿಯಾಗಲಿಲ್ಲ..

ಜೂಜಿನ ಸರಕಾಗಿ ಸೀರೆ ಸೆಳೆಸಿಕೊಂಡರು, ಮಾನಿನಿಯಾದ ದ್ರೌಪದಿ ಕರಗಿ ನಿರಾಗಲಿಲ್ಲ..

ಕಣ್ಣ ಪಟ್ಟಿಯ ಒಳಗೂ ಸಾವಿರದ ಬೆಳಕು ಕಂಡ, ಮಹಾಸಾದ್ವಿ ಗಾಂಧಾರಿ ಕುರುಡಿಯಾಗಲಿಲ್ಲ…

ಪುರಾಣಗಳ ಸಾವಿತ್ರಿ, ತಾರಾ,ಭಾನು, ದಮಯಂತಿ ಇವರಂತೆ ಬೂದಿ ಮಣ್ಣು ನೀರಾಗಿ ಹರಿಯಬೇಕಿಲ್ಲ…

ನಾನು ನನ್ನೊಳಗಿನ ಹೆಣ್ತನದ ಒಟ್ಟು ಮೊತ್ತ,
ನನಗೋ ಬರಿ ಮಾನವಳಾಗುವ ಬಯಕೆ.

ನಾನು ಅವರಂತಾಗಲೇ?
ಒಂದೊಮ್ಮೆ ಆಗದಿದ್ದರೇ,
ಇತಿಹಾಸ,ಪುರಾಣ,ಚರಿತ್ರೆಯಾಗುವುದು
ಬೇಡ,
ಮಾನವ್ಯದ ಬೀಜವಾದರೂ ಸಾಕು.

🔆🔆🔆

✍️ಡಾ. ಮೈತ್ರೇಯಿಣಿ ಗದಿಗೆಪ್ಪಗೌಡರ ರಾಣಿಚೆನ್ನಮ್ಮವಿಶ್ವವಿದ್ಯಾಲಯ, ಬೆಳಗಾವಿ