ಅಮ್ಮನೆಸೆದ ಕಾಳು ತಿನಲು
ಚಿಮ್ಮಿ ಹಾರಿ ,ಬರುತಲಿ
ನಮ್ಮ ಮನವ ತಣಿಸುತ್ತಿದ್ದ
ನಿಮ್ಮ ಬಳಗವೆಲ್ಲಿದೆ?

ಕಾಡು ನಾಶವಾಗಿ ಹೋಗೆ
ನಾಡ ದಾರಿ ಹಿಡಿದಿರ?
ಪಾಡು ಪಡುತ ನೋವಿನಿಂದ
ಹಾಡ ಹಾಡೆ ಮರೆತಿರ?

ಬಲೆಯ ದಿಗಿಲು ಮನವ ಕಾಡೆ
ನೆಲೆಯ ಹುಡುಕಿ ಸಾಗುತ
ಛಲವ ಬಿಡದೆ ನಿರುತ ಕಾರ್ಯ
ಗೆಲುವ ಕನಸ ಕಟ್ಟುತ

ಗಿಡವ ಬೆಳೆಸಿ ಹಸಿರನುಳಿಸಿ
ಪೊಡವಿ ಬೆಳೆಸಿ ಪೊರೆವೆವು
ಸುಡುವ ಬಿಸಿಲ ಬೇಗೆ ತಣಿಸಿ
ಕುಡಿವ ನೀರು ಕೊಡುವೆವು

(ವಿಶ್ವ ಗುಬ್ಬಚ್ಚಿ ದಿನದ ಶುಭಾಶಯಗಳು)

✍️ಸುಜಾತಾ ರವೀಶ್
ಮೈಸೂರು