ಜೂನ್ ೧೬, ರವಿವಾರ ದಿನ ಹುಬ್ಬಳ್ಳಿಯಲ್ಲಿ ನನ್ನ ಸಂಪಾದಕತ್ವದಲ್ಲಿ “ಗಾಣಿಗರ ಹೆಜ್ಜೆಗಳು” ಕೃತಿಯ ಲೋಕಾರ್ಪಣೆ ಸಂದರ್ಭದಲ್ಲಿ ದೇಸಾಯಿ ಚಲನ ಚಿತ್ರದ ನಟ, ನಿರ್ಮಾಪಕ ಮಹಾಂತೇಶ ಚೊಳಚಗುಡ್ಡ ಅವರು ವೇದಿಕೆ ಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವ ಮೂಲಕ ನನ್ನ ಕೃತಿ ಕುರಿತು ಹಾಗೂ ಚಲನಚಿತ್ರ ಕುರಿತು ಮಾತನಾಡಿದರು. ಆಗ ನಾನು ಅವರ ಜೊತೆಗೆ ದೇಸಾಯಿ ಕುರಿತು ಮಾತನಾಡಿದಾಗ ಕತೆಯ ತಿರುಳನ್ನು ನನಗೆ ತಿಳಿಸಿದರು.

ನಿಜಕ್ಕೂ ಉತ್ತರ ಕರ್ನಾಟಕದ ಪ್ರತಿಭೆಯ ಗಾಂಧಿ ನಗರದ ಒಡನಾಟದ ಕುರಿತು ಬರಹವನ್ನು ರೂಪಿಸಬೇಕೆಂದುಕೊಂಡೆ. ಉತ್ತರ ಕರ್ನಾಟಕದ ಪ್ರತಿಭೆಯೊಂದು ಸಿನಿಮಾ ಕನಸು ಹೊತ್ತುಕೊಂಡು ಬೆಂಗಳೂರಿನ ಗಾಂಧಿನಗರಕ್ಕೆ ಹೋಗಿ ಮರಳಿ ಊರಿಗೆ ಬಂದು, ಮತ್ತೆ ಬೆಂಗಳೂರು ಸೇರಿ ದೇಸಾಯಿ ಎಂಬ ಸಿನಿಮಾ ಮಾಡಿದ್ದು ನಾನು ಈಗ ಹೇಳ ಹೊರಟಿರುವ ಕಥೆ. ಕೌಟುಂಬಿಕ ಜೀವನದ ಪ್ರೀತಿ ವಿಶ್ವಾಸ ತುಂಬಿದ ಬದುಕಿನ ಚಿತ್ರಣವನ್ನು ಕಟ್ಟಿಕೊಡುವ ಸಿನಿಮಾ ಮಾಡಬೇಕು ಎಂಬುದು ಮಹಾಂತೇಶ್ ಚೊಳಚಗುಡ್ಡ ಅವರ ಕನಸು. ಮಹಾಂತೇಶ ಚೊಳಚಗುಡ್ಡ ಅವರು ಮೂಲತಃ ಬಾಗಲಕೋಟೆಯವರು. ಇವರ ತಂದೆ ವಿರುಪಾಕ್ಷಪ್ಪ ಮಾಗುಂಡಪ್ಪ ಚೊಳಚಗುಡ್ಡ. ತಾಯಿ ಶಾಂತವ್ವ. ಈ ದಂಪತಿಗಳ ಐದು ಜನ ಮಕ್ಕಳಲ್ಲಿ ಇವರು ಮೂರನೆಯವರು. ಇವರಿಗೆ ಇಬ್ಬರು ಅಕ್ಕಂದಿರು, ಓರ್ವ ತಮ್ಮ, ಒಬ್ಬ ತಂಗಿ ಇರುವರು. ಸಿನಿಮಾ ಕನಸು ಹೊತ್ತ ಇವರು ಓದಿದ್ದು ಐಟಿಐ, ಡಿಪ್ಲೋಮಾ ಇನ್ನ ಸಿನಿಮಾ. ನಂತರ ಪೋಟೋಗ್ರಫಿ,ವಿಡಿಯೋ ಗ್ರಫಿಯಲ್ಲಿ. ಮೊದಲೇ ಹೇಳಿದಂತೆ ೨೫ ವರ್ಷಗಳ ಹಿಂದೆ ಗಾಂಧಿನಗರಕ್ಕೆ ಬಂದ ಮಹಾಂತೇಶ್ ಚೊಳಚ ಗುಡ್ಡ ಎಂಬ ಬಾಗಲಕೋಟೆ ಜಿಲ್ಲೆಯ ಪ್ರತಿಭೆ. ಅವರು ಆಗ ಬೆಂಗಳೂರಿನ ವಿಜಯ ಫಿಲಂ ಇನ್ಸಿಟ್ಯೂಟ್ನಲ್ಲಿ ನಟನಾ ತರಬೇತಿಯನ್ನು ಪಡೆದಿದ್ದರು. ಸುಮಾರು ಮೂರು ವರ್ಷಗಳ ಕಾಲ ಸಿನಿಮಾರಂಗ ಸುತ್ತಿ, ಸಣ್ಣಪುಟ್ಟ ಪಾತ್ರ ಮಾಡಿದ ಅವರಿಗೆ ಆ ಸಂದರ್ಭದಲ್ಲಿ ಸೂಕ್ತ ಪ್ರೋತ್ಸಾಹ ಸಿಗಲಿಲ್ಲ. ಅಲ್ಲಿಂದ ತಮ್ಮ ವೃತ್ತಿಯನ್ನು ಅರಸಿ ಹೋದ ಮಹಾಂತೇಶ್ ಅವರಿಗೆ ಮನದ ಮೂಲೆ ಯಲ್ಲೊಂದು ಆಸೆ ಇತ್ತು. ಒಂದಲ್ಲ ಒಂದು ದಿನ ಒಂದೊಳ್ಳೆ ಸಿನಿಮಾ ಮಾಡಬೇಕು ಎಂದು. ಅದರಂತೆ ಈಗ ‘ದೇಸಾಯಿ’ ಚಿತ್ರ ನಿರ್ಮಾಣ ಮಾಡಿದ್ದಾರೆ. ಇವರು ಇದಕ್ಕಿಂತ ಮೊದಲಿಗೆ ಈಟೀವಿ ಯಲ್ಲಿ ೨೦ ವರ್ಷಗಳ ಕಾಲ ಹಾಗೂ ನ್ಯೂಸ್ ೧೮ ದಲ್ಲಿ ಕಳೆದ ೨೦ ವರ್ಷಗಳ ಕಾಲ ದಿಂದ ವರದಿಗಾರರಾಗಿ ಕೂಡ ಕೆಲಸ ನಿರ್ವಹಿ- ಸಿರುವರು. ಒಂದೆಡೆ ವರದಿಗಾರಿಕೆ ಮತ್ತೊಂದೆಡೆ ಸಿನಿಮಾ ಸೆಳೆತ. ಈಗ ದೇಸಾಯಿ ಚಲನಚಿತ್ರ ತಮ್ಮದೇ ಆದ ಕತೆಯೊಂದಿಗೆ ತಾವು ಅಭಿನಯಿ ಸುವ ಮೂಲಕ ನಿರ್ಮಾಣ ಮಾಡಿರುವುದರ ಹಿಂದೆ ಪರಿಶ್ರಮ, ಸತತ ಪ್ರಯತ್ನವಿದೆ.

‘ಶ್ರೀ ವೀರಭದ್ರೇಶ್ವರ ಕ್ರಿಯೇಟಿವ್ ಫಿಲಂಸ್’ ಲಾಂಛನದಲ್ಲಿ ಮಹಾಂತೇಶ ಚೋಳಚಗುಡ್ಡ ಕಥೆ ಬರೆದು ನಿರ್ಮಿಸಿರುವ ಚಿತ್ರ ‘ದೇಸಾಯಿ‘. ಈ ಸಿನಿಮಾಕ್ಕೆ ನಾಗಿರೆಡ್ಡಿ ಭಡ ನಿರ್ದೇಶನ ಮಾಡಿರುವರು. ‘ಲವ್ ೩೬೦’ ಖ್ಯಾತಿಯ ಪ್ರವೀಣ್ ಕುಮಾರ್ ಹಾಗೂ ರಾಧ್ಯಾ ಜೋಡಿ ಯಾಗಿ ನಟಿಸಿ ರುವ ಈ ಚಿತ್ರದಲ್ಲಿ ಮಹಾಂತೇಶ್ ಕೂಡಾ ಕೋಚ್ ಪ್ರಮುಖ ಪಾತ್ರ ಮಾಡಿದ್ದಾರೆ. ಈ ಕತೆಗೆ ಮಹಾಂತೇಶ ಆಯ್ದುಕೊಂಡಿದ್ದು ಗಾಣಿಗ ವೃತ್ತಿ ಬದುಕಿನ ದೇಸಾಯಿ ಕುಟುಂಬದ ಹಿನ್ನಲೆಯ ಕತೆಯನ್ನು. ಅದು ಸಿನಿಮಾ ಮಾಡುವ ಅವರ ಕನಸು ಕೂಡ. ಅದಕ್ಕೆ ನಿದರ್ಶನ ನಾಗಿರೆಡ್ಡಿ ಭಡ ಅವರದು.
ಮಹಾಂತೇಶ ಅದೆಷ್ಟೋ ವರ್ಷ ಬಿಟ್ಟು ತಮ್ಮ ಕನಸು ಈಡೇರಿಸಿಕೊಳ್ಳುವ ಕಾಲಘಟ್ಟದಲ್ಲಿ ಇಂದು ಇದ್ದಾರೆ. ಕನ್ನಡ ಚಿತ್ರರಂಗದಲ್ಲಿ ತಾನೊಬ್ಬ ನಟನಾಗಬೇಕೆಂದು ೨೫ ವರ್ಷಗಳ ಹಿಂದೆ ಬಂದ ವ್ಯಕ್ತಿಯೊಬ್ಬರು, ಪ್ರೋತ್ಸಾಹದ ಕೊರತೆಯಿಂದ ಸುಮ್ಮನೆ ಕುಳಿತು ಕೊಳ್ಳದೇ ವರದಿಗಾರನಾಗಿ ಕೆಲಸ ನಿರ್ವಹಿಸುತ್ತ, ಸಿನಿಮಾ ನಂಟನ್ನು ಹೊಂದುತ್ತ ಬಂದಿದ್ದರ ಹಿಂದೆ ಬಹಳ ಪ್ರಯತ್ನ ವಿದೆ. ಅದರ ಫಲವಾಗಿ ಮಹಾಂತೇಶ ಈಗ ಚಿತ್ರರಂಗದಲ್ಲಿ ನಿರ್ಮಾಪಕರಾಗಿ ತಮ್ಮನ್ನು ತಾವು ಗುರುತಿಸಿಕೊಳ್ಳುತ್ತಿದ್ದಾರೆ.ಸಧ್ಯ ಇದೇ ಜೂನ್ ೨೧ ರಂದು ಬಿಡುಗಡೆಯ ಹಂತಕ್ಕೆ ಬಂದಿರುವ ‘ದೇಸಾಯಿ’ ಸಿನಿಮಾಕ್ಕೆ ಕಥೆ ಬರೆದು, ನಿರ್ಮಿಸಿ, ಚಿತ್ರದಲ್ಲಿ ಪ್ರಮುಖ ಪಾತ್ರ ಕೂಡಾ ಮಾಡಿದ್ದಾರೆ. ಈ ಮೂಲಕ ೨೫ ವರ್ಷ ಗಳ ನಂತರ ತಮ್ಮ ಕನಸನ್ನು ಈಡೇರಿಸಿಕೊಂಡಿದ್ದಾರೆ.
ನನ್ನೊಂದಿಗೆ ಮಾತನಾಡುತ್ತ ಮಹಾಂತೇಶ “ಜೀವನ ಮೌಲ್ಯ” ಗಳ ಕುರಿತು ಹೇಳುತ್ತ ಭಾವುಕರಾಗಿ ಈ ಕತೆಯ ತಿರುಳನ್ನು ಹೇಳಿದರು. ಕೌಟುಂಬಿಕ ಕತೆಯಲ್ಲಿ ಅದರಲ್ಲೂ ಅಜ್ಜ, ಮಗ, ಮೊಮ್ಮಗ ಹೀಗೆ ಮೂರು ತಲೆಮಾರುಗಳನ್ನು ಹೊತ್ತುಕೊಂಡು ಜೀವನ ಮೌಲ್ಯಗಳ ಮಹತ್ವ ವನ್ನು ತಿಳಿಸುವ ಉತ್ತಮ ಸಂದೇಶ ‘ದೇಸಾಯಿ’ ಎಂಬುದರ ತಿರುಳನ್ನು ತಿಳಿಸಿದರು. ಕೂಡು ಕುಟುಂಬದ ಕಥಾಹಂದರ ಹೊಂದಿರುವ ಸಿನಿಮಾ. ಈ ಕುರಿತು ಮಾತನಾಡುವ ಮಹಾಂತೇಶ್, ‘ಸಿನಿಮಾದಲ್ಲಿ ಇವತ್ತಿನ ಸಮಾಜದಲ್ಲಿ ನಡೆಯುತ್ತಿ ರುವ ಘಟನೆಗಳನ್ನು ಆಧರಿಸಿ ಕಥೆ ಸಾಗುತ್ತದೆ. ಮಕ್ಕಳು ದೊಡ್ಡವರಾದ ನಂತರ, ಮದುವೆ ಬಳಿಕ ತಂದೆ-ತಾಯಂದಿರನ್ನು ಬಿಟ್ಟು ಹೇಗೆ ದೂರ ಹೋಗುತ್ತಾರೆ, ಈ ಸಮಯದಲ್ಲಿ ಹಿರಿಯ ಜೀವಗಳು ಅನುಭವಿಸುವ ನೋವು ಏನು? ಈ ನಡುವೆ ಮೊಮ್ಮಕ್ಕಳ ಪಾತ್ರ, ಮುಂದೊಂದು ತಾವು ತಂದೆ-ತಾಯಿಗೆ ಕೊಟ್ಟ ನೋವು ಸ್ವತಃ ಮಕ್ಕಳಿಗೆ ಸಿಕ್ಕಾಗ ಏನಾಗುತ್ತದೆ ಎಂಬ ಅಂಶ ದೊಂದಿಗೆ ಸಿನಿಮಾ ಸಾಗುತ್ತದೆ. ಇದರ ಮಧ್ಯೆ ಅಣ್ಣ-ತಮ್ಮಂದಿರ ಕಿತ್ತಾಟ, ಉತ್ತರ ಕರ್ನಾಟಕ ಭಾಗದ ಕೆಲವು ಸಮಸ್ಯೆಗಳನ್ನು ಕೂಡಾ ಹೇಳಿದ್ದೇವೆ’ ಎನ್ನುವಾಗ ನಮ್ಮ ಸಂಸ್ಕೃತಿ ಹಾಗೂ ಮಾನವೀಯತೆ ಅರಿವನ್ನು ಚಲನಚಿತ್ರದ ಮೂಲಕ ತೋರಿಸಬೇಕು ಎನ್ನುವ ಕಳಕಳಿ ಎದ್ದು ಕಾಣುತ್ತಿತ್ತು.

ಈ ಚಿತ್ರದಲ್ಲಿ ಉತ್ತರ ಕರ್ನಾಟಕದ ಹಲವು ವಿಶೇಷ ಸ್ಥಳಗಳನ್ನು ಕೂಡಾ ತೋರಿಸಿದ್ದೇವೆ. ಇದೊಂದು ಉತ್ತಮ ಸಂದೇಶವುಳ್ಳ ಸಿನಿಮಾ. ಚಿತ್ರವನ್ನು ನೋಡಿದವರ ಕಣ್ಣಂಚಲ್ಲಿ ಎರಡು ಹನಿಯಾದರೂ ನೀರು ಚಿನುಗುತ್ತದೆ ಎಂಬ ವಿಶ್ವಾಸವಿದೆ’ ಎನ್ನುತ್ತಾರೆ. ಚಿತ್ರದ ಬಹುತೇಕ ಚಿತ್ರೀಕರಣವು ಬಾಗಲಕೋಟೆ ನಗರದ ಸುತ್ತಮುತ್ತ ನಡೆದಿದೆ. ಇನ್ನು ಚಿತ್ರದಲ್ಲಿ ಮಾನ್ಯ ಮಾಜಿ ಉಪಮುಖ್ಯ ಮಂತ್ರಿಗಳು ಹಾಗೂ ಹಾಲಿ ಶಾಸಕರಾಗಿರುವ ಶ್ರೀಲಕ್ಷ್ಮಣ ಸವದಿ ಯವರು ಅತಿಥಿ ಪಾತ್ರವನ್ನು ಮಾಡಿ, ಚಿತ್ರ ತಂಡವನ್ನು ಪ್ರೋತ್ಸಾಹಿಸಿದ್ದಾರೆ.‘ಈ ಸಿನಿಮಾ ಗೆದ್ದರೆ ಮುಂದೆ ಮತ್ತಷ್ಟು ಒಳ್ಳೆಯ ಸಿನಿಮಾಗಳನ್ನು ನಿರ್ಮಿಸುವ ಗುರಿ ಇದೆ’ ಎನ್ನುವ ಮಹಾಂತೇಶ್, ಕನಸುಗಳನ್ನು ಹೊತ್ತಿರುವ ಉತ್ತರ ಕರ್ನಾಟಕದ ಪ್ರತಿಭೆ. ಈ ಚಿತ್ರದಲ್ಲಿ ಮಹಾಂತೇಶ್ ನಾಯಕ ನಟನ ಕೋಚ್ ಆಗಿ ಕಾಣಿಸಿಕೊಂಡಿ ದ್ದಾರೆ.
ಸೆಂಟಿಮೆಂಟ್ಗೆ ಜಾಗವಿದೆ…

ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ನಾಗಿರೆಡ್ಡಿ ‘ಇದೊಂದು ಕೌಟುಂಬಿಕ ಕಥಾಹಂದರವಿರುವ ಸಿನಿಮಾ. ತಾತ, ತಂದೆ ಹಾಗೂ ಮಗ ಮೂರು ತಲೆಮಾರಿನ ಕಥೆ ಇದರಲ್ಲಿದೆ. ಈ ಚಲನಚಿತ್ರದಲ್ಲಿ ಸೆಂಟಿಮೆಂಟ್ ಸನ್ನಿವೇಶಗಳು ಚೆನ್ನಾಗಿ ಮೂಡಿ ಬಂದಿದೆ. ಜನರು ಬಯಸುವ ಎಲ್ಲಾ ರೀತಿಯ ಮನರಂಜ ನಾತ್ಮಕ ಅಂಶಗಳು ನಮ್ಮ ಸಿನಿಮಾ ದಲ್ಲಿದೆ’ ಎನ್ನುತ್ತಾರೆ. ಈ ಚಿತ್ರಕ್ಕೆ ಸಾಯಿಕಾರ್ತಿಕ್ ಸಂಗೀತ ಸಂಯೋಜಿಸಿದ್ದಾರೆ. ಮಹಾಂತೇಶ ಅವರು ನನಗೆ ಮೂರು ಗೀತೆಗಳನ್ನು ವ್ಯಾಟ್ಸಪ್ ನಲ್ಲಿ ಕಳಿಸಿದರು. ತುಂಬಾ ಉತ್ತಮವಾದ ಹಾಡುಗಳು. ಹೋಳಿ ಹುಣ್ಣಿಮೆ ಹಬ್ಬಕ್ಕ ಎಂಬ ಗೀತೆಯನ್ನು ಅನಿರುದ್ಧ ಶಾಸ್ತ್ರೀ ಹಾಡಿರುವರು. ಇದು ಕೂಡು ಕುಟುಂಬದ ಸನ್ನಿವೇಶದಲ್ಲಿ ಚಿತ್ರೀಕರಣವಾಗಿದೆ. ತಮ್ಮ ವೃತ್ತಿ ಬದುಕಿನ ಹಿನ್ನಲೆಯಲ್ಲಿ ಗಾಣ ದೇವತೆ ಯಲ್ಲಿ ಗಾಣದ ಮೂಲಕ ಎಣ್ಣೆ ತಗೆಯುವ ಕುಟುಂಬದ ಸದಸ್ಯ ರೆಲ್ಲ ಒಟ್ಟಿಗೆ ಬೆರೆತು ಹಾಡುವ ಸನ್ನಿವೇಶಗಳನ್ನು ಈ ಹಾಡು ಒಳಗೊಂಡಿದೆ. ನಂತರ ಯುಗಳ ಗೀತೆ “ಒಲವು ಮೂಡೋ ಕಾಲವು” ಈ ಗೀತೆಯನ್ನು ಅನುರಾಧ ಭಟ್ ಮತ್ತು ವಿಜಯ್ ಪ್ರಕಾಶ್ ಹಾಡಿರುವರು. ಬದಾಮಿ, ಮಹಾಕೂಟ, ಐಹೊಳೆ, ಪಟ್ಟದಕಲ್ ಸುತ್ತಮುತ್ತ ಚಿತ್ರೀಕರಣ ಮಾಡಿರುವ ಈ ಗೀತೆಯು ಉತ್ತರ ಕರ್ನಾಟಕದ ಹೊರಾಂಗಣ ದಲ್ಲಿ ಸುಂದರವಾಗಿ ಮೂಡಿಬಂದಿದೆ. ಖ್ಯಾತ ನಿರ್ದೇಶಕರಾದ ಡಾ.ವ್ಹಿ.ನಾಗೇಂದ್ರ ಪ್ರಸಾದ್ ಈ ಗೀತೆಯನ್ನು ರಚಿಸಿರುವರು. ಮತ್ತೊಂದು ಗೀತೆ “ಓ ಜಾನು” ಈ ಗೀತೆಯನ್ನು ಸಂತೋಷ ವೆಂಕಿ ಹಾಗೂ ಐಶ್ವರ್ಯಾ ರಂಗರಾಜನ್ ಹಾಡಿದ್ದಾರೆ. ಪಡ್ಡೆ ಹುಡುಗರ ಪ್ರೇಮ, ಪ್ರೀತಿಯನ್ನು ನಾಯಕ- ನಾಯಕಿಯರ ನೃತ್ಯದಲ್ಲಿ ಈ ಗೀತೆಯಲ್ಲಿ ಕಾಣ ಬಹುದಾಗಿದೆ.ಒಂದು ಸಿನಿಮಾಕ್ಕೆ ಬೇಕಾದ ಕಮರ್ಷಿಯಲ್ ಸೂತ್ರಗಳನ್ನು ತಮ್ಮ ಕತೆಯ ಜೊತೆಯಲ್ಲಿ ಈ ಗೀತೆಗಳಲ್ಲಿ ಅಳವಡಿಸಿಕೊಂಡಿ ರುವುದನ್ನು ನಾವು ಕಾಣಬಹುದಾಗಿದೆ. ಚಿತ್ರದಲ್ಲಿ ನಟರಾಗಿ ಪ್ರಶಾಂತ್, ನಾಯಕಿಯಾಗಿ ರಾಧ್ಯ, ಹಾಗೂ ಮಧುಸೂದನ್ ರಾವ್, ಕಲ್ಯಾಣಿ, ಹರಿಣಿ, ಸೀತಾ ಬೆನಕ, ಆರತಿ ಕುಲಕರ್ಣಿ, ಮಂಜುನಾಥ್ ಹೆಗಡೆ, ಸೃಷ್ಟಿ ಮುಂತಾದವರು ‘ದೇಸಾಯಿ’ ಸಿನಿಮಾದ ಇತರ ಪ್ರಮುಖ ಪಾತ್ರ ಗಳಲ್ಲಿ ಅಭಿನಯಿಸಿದ್ದಾರೆ.

ಈ ಚಲನಚಿತ್ರ ಕುರಿತು ನಾಯಕ ನಟ ಪ್ರವೀಣ್ “ನನ್ನ ಹಿಂದಿನ ‘ಲವ್ ೩೬೦’ ಚಿತ್ರದ ಪಾತ್ರವೇ ಬೇರೆ, ಈ ಚಿತ್ರದ ಪಾತ್ರವೇ ಬೇರೆ. ನಾನು ಈ ಚಿತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದೇನೆ. ಚಿತ್ರದಲ್ಲಿ ಪ್ರವೀಣ್ ದೇಸಾಯಿ ನನ್ನ ಪಾತ್ರದ ಹೆಸರು. ತುಂಬ ಖಡಕ್ ಲುಕ್ ಇರುವಂಥ ಪಾತ್ರ ಇದಾಗಿದೆ.” ಎಂದು ಹೇಳಿದರೆ ಚಿತ್ರದ ನಿರ್ಮಾಪಕ ಮಹಾಂತೇಶ ವಿ ಚೋಳಚಗುಡ್ಡ,“ಇದು ಉತ್ತಮ ಸಂದೇಶವುಳ್ಳ ಸಿನಿಮಾ. ಚಿತ್ರವನ್ನು ನೋಡಿದವರ ಕಣ್ಣಂಚಲ್ಲಿ ಎರಡು ಹನಿ ನೀರು ಜಿನುಗುತ್ತದೆ ಎಂಬ ವಿಶ್ವಾಸವಿದೆ” ಎನ್ನುವಾಗ ನಾನೊಂದು ಪ್ಯಾಮಿಲಿ ಸೆಂಟಿಮೆಂಟ್ ಇರುವ ಚಲನಚಿತ್ರವನ್ನು ಕಟ್ಟಿಕೊಟ್ಟಿರುವೆ ಎಂಬ ಆತ್ಮ ವಿಶ್ವಾಸವನ್ನು ಅವರ ಕಣ್ಣುಗಳಲ್ಲಿ ಕಾಣಬಹುದಾಗಿದೆ. ಇಂತಹ ಉತ್ತರ ಕರ್ನಾಟಕದ ಪ್ರತಿಭೆಯ ಕತೆ ದೇಸಾಯಿ ಇದೇ ಜೂನ್ ೨೧ ರಂದು ರಜತ ಪರದೆಯ ಮೇಲೆ ಮೂಡಿ ಬರುತ್ತಿದೆ. ಈ ಚಲನಚಿತ್ರವನ್ನು ಎಲ್ಲ ಪ್ರೇಕ್ಷಕರು ಥಿಯೇಟರ್ ಗೆ ಹೋಗಿ ನೋಡುವ ಮೂಲಕ ಪ್ರೋತ್ಸಾಹಿಸಬೇಕು.ಅಂದರೆ ಇನ್ನೂ ಹತ್ತು ಹಲವು ಕತೆಗಳನ್ನು ಚಲನಚಿತ್ರ ಮಾಡುವ ಮಹಾಂತೇಶ ಚೊಳಚಗುಡ್ಡ ಅವರ ಕನಸಿಗೆ ಸ್ಪೂರ್ತಿ ತುಂಬಿದಂತಾಗುತ್ತದೆ.

ಮಹಾಂತೇಶ ಅವರ ಕೌಟುಂಬಿಕ ಬದುಕು.
ಮಹಾಂತೇಶ ಅವರದು ಆದರ್ಶ ಕುಟುಂಬ. ಇವರ ಧರ್ಮಪತ್ನಿ ಹೆಸರು ಶ್ರೀಮತಿ ಸುಜಾತ. ಪತಿಗೆ ಪ್ರೋತ್ಸಾಹ ನೀಡುವ ಸಹಧರ್ಮಿಣಿ. ಈ ದಂಪತಿಗಳಿಗೆ ಇಬ್ಬರು ಪುತ್ರರು. ಅಮೋಘ ಮಹಾಂತೇಶ ಚೊಳಚಗುಡ್ಡ ಬಿ.ಬಿ.ಎ ವ್ಯಾಸಂಗ ಪೂರೈಸಿರುವರು. ಆದರ್ಶ ಮಹಾಂತೇಶ ಚೊಳಚಗುಡ್ಡ ಬಿ.ಕಾಂ ಮೊದಲ ವರ್ಷದಲ್ಲಿ ಓದುತ್ತಿರುವನು. ಸಂಸ್ಕೃತಿ, ಸಂಸ್ಕಾರ ಆದರ್ಶ ಗಳನ್ನು ಹೊತ್ತ ದಂಪತಿಗಳಾದ ಶ್ರೀಮಹಾಂತೇಶ ಮತ್ತು ಶ್ರೀಮತಿ ಸುಜಾತ ಇವರ ಮಕ್ಕಳು ಕೂಡ ಭಾರತೀಯ ಸಂಸ್ಕೃತಿ ಸಂಸ್ಕಾರದ ಹಾದಿಯಲ್ಲಿ ಬೆಳೆಯುತ್ತಿರುವುದು ಕೂಡ ಸಂತಸದ ಸಂಗತಿ.

ಅಂದ ಹಾಗೆ ಅಥಣಿಯ ಶಾಸಕರು ಮಾಜಿ ಉಪ ಮುಖ್ಯಮಂತ್ರಿಗಳಾದ ಮಾನ್ಯ ಶ್ರೀ ಲಕ್ಷ್ಮಣ ಸವದಿ ಯವರು ಕೂಡ ಈ ಚಲನಚಿತ್ರದಲ್ಲಿ ಒಂದು ಪುಟ್ಟ ಪಾತ್ರದಲ್ಲಿ ಅಭಿನಯಿಸುವ ಮೂಲಕ ನಾಯಕ ನಟನಿಗೆ ಬಹುಮಾನ ವಿತರಣಾ ಸಮಾರಂಭದ ದೃಶ್ಯದಲ್ಲಿ ಕಾಣಿಸಿಕೊಂಡಿರುವುದು ವಿಶೇಷ. ಮಹಾಂತೇಶ ಅವರಿಗೆ ಶುಭ ಕೋರಿ ನನ್ನ ಕೃತಿ ಗಾಣಿಗರ ಹೆಜ್ಜೆಗಳನ್ನು ಅವರಿಗೆ ನೀಡಿದೆ. ತಾವೂ ಕೂಡ ಈ ಚಲನಚಿತ್ರ ವೀಕ್ಷಿಸಿ, ನಮ್ಮ ಉತ್ತರ ಕರ್ನಾಟಕದ ಪ್ರತಿಭೆಯನ್ನು ಪ್ರೋತ್ಸಾಹಿಸಿ.

✍️ಶ್ರೀ ವೈ.ಬಿ.ಕಡಕೋಳ
ಮುನವಳ್ಳಿ–೫೯೧೧೧೭
ತಾ:ಸವದತ್ತಿ ತಾಲೂಕ ಜಿ:ಬೆಳಗಾವಿ
