ಬರುತಿದೆ ಬರುತಿದೆ ಯುಗಾದಿ ಬರುತಿದೆ
ಬರುತಿದೆ ಸಂತಸದಿ ಯುಗಾದಿ ಬರುತಿದೆ.
ಮೌನದ ಮನದೊಳಗೆ ಮಾತಾಗಿ ಬರುತಿದೆ
ಮಾತಿನ ಮನದೊಳಗೆ ಹಾಡಾಗಿ ಬರುತಿದೆ.
ಹಾಡಿನ ಮನದೊಳಗೆ ರಾಗವಾಗಿ ಬರುತಿದೆ
ರಾಗದಲಿ ರಾರಾಜಿಸಿ ಯುಗಾದಿ ಬರುತಿದೆ.
ಆಸೆಯ ಮುಗಿಲೊಳಗೆ ಆನಂದ ತರುತಿದೆ.
ಆನಂದದ ಘಳಿಗೆಯು ಸರಸವ ಆಡುತಿದೆ
ಸರಸದ ಸಮಯದೊಳಗೆ ವಿರಸ ಓಡುತಿದೆ.
ಸಮರಸವ ಬೆರೆಸಿ ಯುಗಾದಿ ಬರುತಿದೆ.
ಬೇವಿನ ಕಹಿಯೊಡನೆ ಬೆಲ್ಲವಾಗಿ ಬೆರೆತಿದೆ
ಕಳೆದಿಹ ನೆನಪಿನೊಳಗೆ ಹೊಸದಾಗಿ ಚಿಗುರುತಿದೆ
ಹೊಸತರ ಹೊನಲೊಳಗೆ ಹರಿಗೋಲು ಹಾಕುತಿದೆ
ಹರಿಗೋಲಿಗೆ ಮುಂದೆ ಸಾಗಿ ಯುಗಾದಿ ಬರುತಿದೆ.

ಶಿವಾನಂದ ನಾಗೂರ, ಧಾರವಾಡ.
