ಹಚ್ಚೇವು ಕನ್ನಡದ ದೀಪ
ಕರುನಾಡ ದೀಪ ಸಿರಿನುಡಿಯ ದೀಪ
ಒಲವೆತ್ತಿ ತೋರುವಾ ದೀಪ//
ಬಹುದಿನಗಳಿಂದ ಮೈಮರವೆಯಿಂದ
ಕೂಡಿರುವ ಕೊಳೆಯ ಕೊಚ್ಚೇವು
ಎಲ್ಲೆಲ್ಲಿ ಕನ್ನಡದ ಕಂಪು ಸೂಸಲು
ಅಲ್ಲಲ್ಲಿ ಕರಣ ಚಾಚೇವು//
ಮರೆತೇವು ಮರೆವ ತೆರೆದೇವು ಮನವ
ಎರದೇವು ಒಲವ ಹಿಡಿನೆನಪ
ನರನರವನೆಲ್ಲ ಹುರಿಗೊಳಿಸಿ ಹೊಸೆದು
ಹಚ್ಚೇವು ಕನ್ನಡದ ದೀಪ//


‘ಕನ್ನಡದ ದೀಪ’ವನ್ನು ಹಚ್ಚಿ ಬೆಳಗಿಸಿದವ ರಲ್ಲಿ ಒಬ್ಬರಾದ ಕವಿ ಡಾ.ಡಿ.ಎಸ್.ಕರ್ಕಿ ಯವರ ಈ ಕವನ ೧೯೪೯ರಲ್ಲಿ ಪ್ರಕಟವಾದ ಅವರ ‘ನಕ್ಷತ್ರಗಾನ’ ಕವನ ಸಂಗ್ರಹದಲ್ಲಿದೆ. ಹುಬ್ಬಳ್ಳಿಯ ಕಲಾ ಕಾಲೇಜಿನ ಪ್ರಾಚಾರ್ಯ ರಾಗಿದ್ದ ಡಾ.ಡಿ.ಎಸ್ ಕರ್ಕಿಯವರು ಹುಬ್ಬಳ್ಳಿ ಯಲ್ಲಿ ಕವಿಗಳಾಗಿ ಮಾತ್ರವಲ್ಲ, ಕನ್ನಡದ ಚಟುವಟಿಕೆಗಳು ಬೆಳೆಯುವುದಕ್ಕೆ ಕಾರಣರಾದ ವರು. ಅವರ ಒಂದೊಂದು ಕವನ ಗಳೂ ಬೆಳಕಿನ ಹಣತೆಗಳೇ! ನವೋದಯ ಕಾಲದ ಪ್ರಮುಖ ಕವಿಗಳಲ್ಲೊಬ್ಬರು ಕರ್ಕಿ. ಸೌಮ್ಯತೆ, ಸೌಜನ್ಯತೆಗಳ ಸಾಕಾರವಾದ ಅವರ ಮಾತು ಮೃದು. ರೀತಿ. ನಯ, ನೀತಿ, ಬದುಕು, ಬರಹ ಒಂದಾದ ಅಪರೂಪದ ಕವಿ. ಅವರ ಗೇಯತೆಯಿಂದಾಗಿ ಗೀತೆಗಳೆನಿಸಿವೆ. ಅವುಗಳ ನಾದ ಮಾಧುರ್ಯದಿಂದಾಗಿ ಅವರು ಮಧುರ ಕವಿ.

ಡಾ.ದುಂಡಪ್ಪ ಸಿದ್ದಪ್ಪ ಕರ್ಕಿ ಬೆಳಗಾವಿ ಜಿಲ್ಲೆಯ ಭಾಗೋಜಿಕೊಪ್ಪದಿಂದ ಬಂದವರು. ೧೯೦೭ ನವಂಬರ್ ೧೫ ರಂದು ಜನಿಸಿದ ಅವರು ಬಾಲ್ಯದಲ್ಲಿ ತಂದೆಯವರನ್ನು ಕಳೆದುಕೊಂಡು ಸೋದರ ಮಾವ ಈಶ್ವರಪ್ಪ ಕಣಗಲಿ ಅವರ ಊರು ಬೆಲ್ಲದ ಬಾಗೇವಾಡಿಯಲ್ಲಿ ಬೆಳೆದರು. ಅಲ್ಲಿಯೇ ಪ್ರಾಥಮಿಕ ಶಿಕ್ಷಣ ಪೂರೈಸಿದ ಅವರು ಧಾರವಾಡ, ಮುಂಬಯಿಗಳಲ್ಲಿ ಉಚ್ಛ ಶಿಕ್ಷಣ ಪಡೆದು ಶಿಕ್ಷಕರಾದರು. ಹೈಸ್ಕೂಲ್ ಶಿಕ್ಷಕರಾಗಿ,ಟ್ರೇನಿಂಗ್ ಕಾಲೇಜಿನ ಪ್ರಿನ್ಸಿಪಾಲರಾಗಿ, ಮೂರುಸಾವಿರ ಮಠದ ಮಹಿಳಾ ಕಾಲೇಜಿನ ಪ್ರಿನ್ಸಿಪಾಲರಾಗಿ ಅನೇಕ ಹುದ್ದೆಗಳನ್ನು ಅಲಂಕರಿಸಿ, ತಮ್ಮ ವ್ಯಕ್ತಿತ್ವದಿಂದ ಶಿಕ್ಷಣ ಕ್ಷೇತ್ರದಲ್ಲಿ ಸಮರ್ಪಣ ಭಾವದ ಸೇವೆ ಗೈದು ಸಹಸ್ರಾರು ಶಿಷ್ಯರಿಗೆ ಆದರ್ಶ ಗುರುವಾದರು. ನೀಟಾದ ಅಚ್ಚು ಕಟ್ಟಿನ ಶುಭ್ರವಸ್ತ್ರ, ಸರಳ, ಹೃದಯ, ಪಾಠ ಹೇಳುವಾಗಿನ ತನ್ಮಯತೆ, ಕಾವ್ಯಮಯ ಶೈಲಿ ಇವುಗಳನ್ನು ಅವರ ಅಸಂಖ್ಯಾತ ವಿದ್ಯಾರ್ಥಿಗಳು ಇಂದಿಗೂ ಸ್ಮರಿಸುತ್ತಾರೆ.

ಗುರುವರ್ಯ ಡಾ.ಡಿ.ಎಸ್.ಕರ್ಕಿಯವರು ಒಂದು ಕವಿತೆಯಲ್ಲಿ ಹೀಗೆ ಬರೆಯುತ್ತಾರೆ:

ಚಿಕ್ಕೆಯ ತೆರೆದಲಿ ನಕ್ಕು ನಲಿವೆ ನೀ
ನಿರ್ಮಲ ಹರ್ಷದಲಿ
ನಿನ್ನೀ ತಿಳಿನಗೆ ಸೆರೆಹಿಡಿವುದು ಬಗೆ
ಯನು ಅರೆನಿಮಿಷದಲಿ//
ಗಾತ್ರವೋ ಕಿರಿದು, ಗುಣವೋ ಹಿರಿದು
ಇದೆ ನಿನ್ನ ರಹಸ್ಯ
ಕಿರಿ ರೂಹಿನಲಿ ಅರಳಿದ ತರಳೆ
ಜೀವನ ಸ್ವಾರಸ್ಯ//
ನಿನ್ನೊಳು ಸರಳತೆ ಸೌಂದರ್ಯದ ಜೊತೆ
ಯಲಿ ಬಾಳುತಲಿಹುದು
ನರುಗುಂಪಿನ ಸಿರಿ ಒಲವಿನ ನಲವಿನ
ಕತೆ ಹೇಳುತಲಿಹುದು//

ಈ ಕವನದಲ್ಲಿ ಮಲ್ಲಿಗೆಯನ್ನು ಕುರಿತಾದ ಬಣ್ಣನೆಯು ಡಾ.ಕರ್ಕಿಯವರ ವ್ಯಕ್ತಿತ್ವಕ್ಕೆ ಸಮಂಜಸ ವಾಗಿ ಒಪ್ಪುತ್ತದೆ. ಅವರನ್ನು ಬಲ್ಲವರು, ಕಣ್ಣಾರೆ ಕಂಡವರು ಇದರ ಅನುಭವವನ್ನು ಚೆನ್ನಾಗಿ ಹೊಂದಿದವರೇ ಆಗಿದ್ದಾರೆ. ಮಲ್ಲಿಗೆಯಂಥಹ ಬಾಳನ್ನೇ ಬಾಳಿದ ಕವಿಗಳವರು. ಆದ್ದರಿಂದಲೇ ಕನ್ನಡಿಗರಿಗೆಲ್ಲ ಅವರು ಕಾವ್ಯರ್ಷಿಗಳು.
ಡಾ.ಕರ್ಕಿಯವರು ಗ್ರಂಥರಾಶಿಯನ್ನೇ ಸೃಷ್ಟಿಸಿ ಕೃತಿಗಳ ಬಣವೆ ಒಟ್ಟಿದವರಲ್ಲ. ಕೆಲವೇ ಕೆಲವು ಮೌಲ್ಯಯುತ ಕೃತಿಗಳನ್ನು ರಚಿಸಿದವರು.ಅವರ ರಚನೆಗಳಲ್ಲಿ ಸಾಕಷ್ಟು ಪರಿಶ್ರಮ, ಬುದ್ಧಿ ಭಾವಗಳ ಸಂಗಮ ಕಾಣುತ್ತದೆ.ಕಾವ್ಯದ ಅಂತಿಮ ಪ್ರಯೋಜನ ಆನಂದವೆಂದೇ ಅವರು ನಂಬಿದ್ದರಿಂದ ಆನಂದದ ಅವಿರ್ನವವಾಗಿದೆ ಅವರ ಕಾವ್ಯ ಸೃಷ್ಟಿ. ವರಕವಿ ಬೇಂದ್ರೆಯವರು ಹೇಳಿದ ಹಾಗೆ “ದುಃಖ ಮಾಸುವ ಸುಖದ ಸಂವೇದನೆ ಅವರ ಕಾವ್ಯದಲ್ಲಿದೆ” ಎಂಬುವುದು ನಾವೆಲ್ಲರೂ ಒಪ್ಪ ಬೇಕಾದ ನುಡಿ. ಗದ್ಯ ಹಾಗೂ ಪದ್ಯ ಎರಡನ್ನೂ ಹೃದ್ಯವಾಗಿಯೇ ಸೃಷ್ಟಿಸಿರುವ ಕರ್ಕಿಯವರು ಮೂಲತಃ ಭಾವಜೀವಿ ಗಳಾಗಿದ್ದರೂ ವಾಸ್ತವಿಕತೆಯ ಪರಿಧಿಯ ಆಚೆ ಉಳಿದಿರ ಲಿಲ್ಲ. ಅವರ ಪದ್ಯ ಸಾಹಿತ್ಯವು ಹೇಗೆ ಭಾವ ಪ್ರಧಾನವಾಗಿದೆಯೋ ಹಾಗೆಯೇ ಅವರ ಗದ್ಯ ಸಾಹಿತ್ಯವೂ ವಿಚಾರ ಪ್ರಧಾನವಾಗಿದೆ.

ಡಾ.ಕರ್ಕಿಯವರ ವ್ಯಕ್ತಿತ್ವ ದೊಡ್ಡದು. ಅವರ ಜೀವನವೂ ಶುದ್ಧ, ಕಾವ್ಯವೂ ಶುದ್ಧ. ಮನಸ್ಸನ್ನು ಮಂದಾರ ಲೋಕದಲ್ಲಿ ವಿಹರಿ ಸುವಂತೆ ಮಾಡುವ ಅವರ ಕಾವ್ಯ ಮಾಧುರ್ಯ,ಆ ಪ್ರಾಸಾದಿಕಗುಣ ಅಸದೃಶ್ಯ ವಾದುದು. ಕವಿ ಕರ್ಕಿಯವರ ಕಾವ್ಯ ಕ್ಷಿತಿಜದ ತುಂಬ ಬೆಳಕಿನ ನಕ್ಷತ್ರಗಳು! ‘ನಕ್ಷತ್ರಗಾನ’ ಬೆಳಕಿಗೆ ಗಾನಮಾಧುರ್ಯದ ಸೊಬಗು ನೀಡಿದ ಕವಿ ಪ್ರತಿಭೆ. ಭಾವತೀರ್ಥದಲ್ಲಿ ಕಾಣಬರುವ ಪುನೀತ ಚಿತ್ತದ ಪ್ರಸನ್ನತೆ, ‘ತನನಂ ತೋಂ’ ದಲ್ಲಿ ಕಂಡು ಬರುವ ನಾದಮಾಧುರ್ಯ ಎಲ್ಲವೂ ಕರ್ಕಿಯವರ ಜೀವನ-ಕಾವ್ಯ ತತ್ವವನ್ನು ಎತ್ತಿ ತೋರಿಸುತ್ತದೆ.

ಅವರ ಪ್ರಥಮ ಕವನ ಸಂಕಲನ ‘ನಕ್ಷತ್ರ ಗಾನ’ ಇಲ್ಲಿ ನಿಸರ್ಗದ ಬಗೆಬಗೆಯ ಬಣ್ಣನೆ ನಾದಮಾಧುರ್ಯ ದಿಂದ ತುಂಬಿ ತುಳುಕಿದೆ. ದ್ವಿತೀಯ ಕವನಕೃತಿ ‘ಭಾವ ತೀರ್ಥ’ ಹಂಪೆ, ಬನವಾಸಿ, ಗೋಕರ್ಣ, ಹಳೆಬೀಡು, ಬೇಲೂರು, ಐಹೊಳೆ, ಕೂಡಲ ಸಂಗಮ ಮುಂತಾದ ಸುಂದರ ತೀರ್ಥಕ್ಷೇತ್ರ ಗಳ ವರ್ಣನೆಯಿಂದಾಗಿ ನಾಡಿನ ಪುಣ್ಯ ಕ್ಷೇತ್ರಗಳ ಕೈಪಿಡಿಯೆನಿಸಿದೆ. ‘ಗೀತಗೌರವ’- ಹದಿನೆಂಟು ಕಥನಕವನಗಳ ಸುಮಧುರ ಸಂಕಲನ. ಈ ಸಂಗ್ರಹದ ಗೌರವ ಹೆಚ್ಚಿಸಿ ದವರೆಲ್ಲರೂ ಬೆಳಕಿನ ಅಧಿದೇವತೆಗಳು. ಬುದ್ಧ, ಬಸವ, ಗಾಂಧಿ, ನೆಹರು ಈ ನಾಡಿನ ಚಿಂತಾಮಣಿಗಳಾದ ಅತ್ತಿಮಬ್ಬೆ, ಲಕ್ಕಮ್ಮ ಹೀಗೆ ಜೀವನವನ್ನು ಬೆಳಕಿನೆಡೆಗೆ ಒಯ್ಯುವ ಈ ಮಹಾಜೀವಿಗಳ ಜೀವನದಲ್ಲಿ ಘಟಿಸಿದ ಒಂದೊಂದು ಘಟನೆಗಳು ಇಲ್ಲಿ ಮೂಡಿರುವ ಕಾವ್ಯದ ವಸ್ತು. ತಮ್ಮ ಪ್ರತಿಭೆಯ ಕುಂಚದಿಂದ ಚಿತ್ತಭಿತ್ತಿಯ ಮೇಲೆ ಆ ಘಟನೆಯನ್ನು ಚಿತ್ರವತ್ತಾಗಿ ಚಿತ್ರಿಸಿದ ಈ ನೈಪುಣ್ಯ ಕರ್ಕಿಯವರ ಕಾವ್ಯ ಶಕ್ತಿಗೆ ಸಾಧ್ಯ.‘ಕರಕಿ ಕಣಗಿಲು’ ನಾಲ್ಕನೆಯ ಕವನ ಸಂಕಲನ. ನವ್ಯ ಕಾವ್ಯದ ಹೊಸ ಸುಗ್ಗಿಯ ಮಧ್ಯೆ ಮರೆತು ಹೋಗಲಿರುವ ರಮ್ಯ ಪರಂಪರೆಯ ಭಾವಗೀತೆಗಳನ್ನು ಸೃಜಿಸಿ ಪುನರುಜ್ಜೀವನಗೊಳಿಸಿದ ಶ್ರೇಯಸ್ಸು ಕರ್ಕಿಯವರಿಗೆ ಸಲ್ಲುತ್ತದೆ. ‘ನಮನ’ ಕೃತಿಯು ಭಕ್ತಿ ಪ್ರಧಾನವಾದ ಪ್ರಾರ್ಥನಾ ಗೀತೆಗಳ ಸಂಕಲನ.

ರಮ್ಯ ಪ್ರಕೃತಿ, ಘನ ಸಂಸ್ಕೃತಿ
ಸುಳಿಯ ಭಾವದಲ್ಲಿ
ನಿನ್ನ ಅಡಿಗೆ ಮಣಿಯುದು ಮನ
ಓ ಭಾರತ ಜನನಿ
ಸತ್-ಚಿತ್-ಸಂಚಾರಿಣಿ

ಹಲವಾರು ಸಲ ಆಕಾಶವಾಣಿಯಿಂದ ತೂರಿಬಂದ ಈ ಕವನ ಸಾವಿರಾರು ಜನರ ಹೃದಯವನ್ನು ಅರಳಿಸಿ ಮೈ ಮನಗಳನ್ನು ಪುಳಕಗೊಳಿಸಿದೆ. ಓ ರೋಮಾಂಚನೆಗೆ ಈ ಕವನದಲ್ಲಿರುವ ಭಾವ-ಭಾಷೆ ಗಳ ಸರಳ ಸಂಯೋಜನೆ, ಕವಿ ಹೃದಯಕ್ಕೆ ಚಿಂತನೆ ಯಿಂದ ಮೂಡಿಬಂದ ದೇಶಭಕ್ತಿಯ ಅಭಿವ್ಯಕ್ತಿಯೇ ಕಾರಣ. ಭಾರತ ಜನನಿಯ ತನುಜಾತೆಯಾದ ಕರ್ನಾಟಕ ಮಾತೆಯ ವರಪುತ್ರರಾದ ಡಾ.ಡಿ.ಎಸ್. ಕರ್ಕಿಯವರು ಭಾರತಾಂಬೆಯ ಭವ್ಯ ಸಂಸ್ಕೃತಿ ಯನ್ನು, ನಿಸರ್ಗ ಸೌಂದರ್ಯವನ್ನು, ನೈಜವಾಗಿ ಸ್ಮರಿಸಿ,ಅಭಿವ್ಯಕ್ತಪಡಿಸಿರುವುದು ಸ್ಪಷ್ಟವಾಗಿ ಕಂಡುಬರುತ್ತದೆ.

ಮಕ್ಕಳ ಶಿಕ್ಷಣ-ಶಿಕ್ಷಕರಿಗೆ ಕೈಪಿಡಿ ಕರ್ಕಿಯವ ರಿಂದ ಮೂಡಿಬಂದ ಅದ್ಭುತವಾದ ಗದ್ಯ ಗ್ರಂಥ. ಕರ್ಕಿಯವರು ಶಿಶುಗೀತೆಗಳನ್ನೂ ಬರೆದಿದ್ದಾರೆ. ‘ಬಣ್ಣದ ಚೆಂಡು’ ಎಂಬ ಸಂಗ್ರಹ ದಿ.ಎಸ್.ಡಿ. ಇಂಚಲ ರವರ ಕೆಲವು ಕವನಗಳನ್ನು ಕೂಡಿಸಿ ಕೊಂಡುದು. ಇಂಚಲ-ಕರ್ಕಿ ಎರಡು ದೇಹ, ಒಂದು ಜೀವ ವಾಗಿ ಬಾಳಿದವರು. ಇದರ ಸಂಕೇತವಾಗಿರ ಬೇಕು ಈ ಸಂಗ್ರಹ. ‘ತನನಂ ತೋಂ’ ಎಂಬುದು ಇವರ ಇನ್ನೊಂದು ಶಿಶುಗೀತೆಗಳ ಸಂಗ್ರಹ.

ಗದ್ಯ ಲೇಖನ ಕರ್ಕಿಯವರಿಗೆ ದೂರವಲ್ಲ. ಅವರ ‘ನಾಲ್ದೆಸೆಯ ನೋಟವು’ ಅವರ ಗದ್ಯಕ್ಕೆ ಉದಾಹರಣೆ. ಜೀವನ ಪ್ರಕೃತಿ, ಕಲೆ ಸಾಹಿತ್ಯಗಳ ನಾಲ್ಕು ನಿಟ್ಟಿನ ನೋಟ ಇಲ್ಲಿ ವ್ಯಕ್ತವಾಗಿದೆ. ಜೀವನ ವನ್ನು ರೂಪಿಸುವಲ್ಲಿ ಶಿಕ್ಷಣ, ಅದಕ್ಕೆ ಸಂಸ್ಕಾರ ನೀಡುವಲ್ಲಿ ಪ್ರಕೃತಿ ಹಾಗೂ ಕಲೆಗಳಸ್ಥಾನ. ಮಾಗೂರು ಮಲ್ಲಪ್ಪ ‘ಜೋಗದ ಗುಂಡಿ’ ಹಾಗೂ ಕುವೆಂಪು ಅವರ ಕೃತಿಗಳ ದರ್ಶನ-ವಿಮರ್ಶೆಗಳು ಇಲ್ಲಿ ಅರ್ಥಪೂರ್ಣವಾಗಿ ಮೂಡಿವೆ.

ಕರ್ಕಿಯವರು ಪಿ.ಹೆಚ್.ಡಿ ಪದವಿಗಾಗಿ ರಚಿಸಿದ ‘ಛಂದೋವಿಕಾಸ’ ಆಳವಾದ ಸಂಶೋಧನೆ, ಸೃಜನಶೀಲತೆ ಹಾಗೂ ವಿಮರ್ಶೆಯ ತ್ರಿವೇಣಿ ಸಂಗಮವಾಗಿ ಸ್ನಾತಕೋತ್ತರ ಅಭ್ಯಾಸಿಗಳಿಗೆ ಆಧಾರ ಗ್ರಂಥವಾಗಿದೆ. ಕರ್ಕಿಯವರು ತಮ್ಮ ಸಂಶೋಧನೆಯಲ್ಲಿ ತೋರಿಸುವ ಅಪಾರ ಪಾಂಡಿತ್ಯ, ರಸಿಕತೆ ಆದರಣೀಯವಾಗಿದೆ. ಕನ್ನಡ ಛಂದಸ್ಸಿನ ಪ್ರತಿಯೊಂದು ಪ್ರಕಾರದ ಉಗಮ, ಹೆಸರು, ಲಕ್ಷಣ, ಉದಾಹರಣೆ, ಪ್ರಕಾರ, ವೈವಿಧ್ಯ, ಅದರ ಚರಿತ್ರೆ-ಹೀಗೆ ಕ್ರಮವಾಗಿ ಹೇಳಿ ವಿದ್ವಾಂಸರ ಚರ್ಚೆ, ತಮ್ಮ ತೀರ್ಮಾನ ಇವುಗಳನ್ನು ಪ್ರಕಟಿಸಿರುವ ಬಗೆಯು ಅವರ ಶಾಸ್ತ್ರ ಪಾಂಡಿತ್ಯಕ್ಕೆ ಸಾಕ್ಷಿಯಾಗಿದೆ.

ಕರ್ಕಿ ಭಾವಜೀವಿ.ನಿಷ್ಠುರ ಆಡಳಿತದ ಹೊಣೆ ಹೊತ್ತಾಗಲೂ ಅವರದ್ದು ಭಾವ ಜೀವವೇ ಆಗಿದ್ದಿತು, ಹೆಂಗರುಳು ಎನ್ನ ಬಹುದು. ಆಡಳಿತದಲ್ಲಿ ಬಿಗುವಿಗಿಂತ ನಗುವಿಗೆ ಸ್ಥಾನ. ಶಿಸ್ತಿಗಿಂತ ಒಲವಿಗೆ, ಆತ್ಮೀಯತೆಗೆ ಆದ್ಯತೆ. ಕರ್ಕಿಯವರು ಯಾರೊಡನೆಯೂ ನಿಷ್ಠುರತೆಯನ್ನು ತಂದು ಕೊಂಡವರಲ್ಲ. ಅನೇಕ ಊರುಗಳಲ್ಲಿ ಭಾಷಣ ಮಾಡುವ ಅವಕಾಶ ಕರ್ಕಿಯವ ರದ್ದು. ಅವರ ಭಾಷಣದಲ್ಲಿಯೂ ಅದೇ ನಯ, ಅದೇ ವಿನಯ. ಅದೇ ಭಾವೋತ್ಕಟತೆ. ಅದೇ ಆದರ್ಶಗಳ ದೃಷ್ಟಿ. ಸಂಸ್ಕೃತ- ಪರಂಪರೆಗಳ ಬಗೆಗಿನ ಗೌರವ, ದೈವತ್ವದೆಡೆಗೆ ನೋಟ ಕಾಣುವಂತಹುದು.

ಇವರ ಸೇವೆಯನ್ನು ಮನಗಂಡು ೧೯೭೨ ರಲ್ಲಿ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಹುಬ್ಬಳ್ಳಿಯ ನಾಗರಿಕರು ೧೯೬೮ರಲ್ಲಿ ಷಷ್ಠಬ್ದಿ ಸಮಾರಂಭ ಏರ್ಪಡಿಸಿ ‘ಗೀತಗೌರವ’ ಕವನ ಸಂಕಲನ ಬೆಳಕಿಗೆ ತಂದಿದೆ. ಜಾಗೃತ ಪ್ರಕಾಶನದವರು ರಾಜ್ಯೋತ್ಸವದ ಶುಭದಿನದಂದು ‘ಕಾವ್ಯರ್ಷಿ’ ಗೌರವ ಸಂಪುಟ ಅರ್ಪಿಸಿ ಕೃತಜ್ಞತೆ ಸಲ್ಲಿಸಿತು.

ಸುಮಾರು ಇಪ್ಪತ್ತು ವರ್ಷಗಳಷ್ಟು ಸುದೀರ್ಘ ಅವಧಿಯನ್ನು ಬೆಳಗಾವಿಯ ಶೈಕ್ಷಣಿಕ ಸಂಸ್ಥೆಗಳಲ್ಲಿ ಬೋಧನೆಗೈಯುತ್ತಾ ಕಳೆದ ಡಾ.ಕರ್ಕಿಯವರಿಗೆ ಗಡಿನಾಡಿನಲ್ಲಿ ನಶಿಸಿಹೋಗುತ್ತಿದ್ದ ಕನ್ನಡತನದ ಕೆಚ್ಚನ್ನು ಪ್ರಜ್ವಲಗೊಳಿಸುವ ಕಾರ್ಯಕ್ಕೆ ಅಂತರಂಗದ ಪ್ರೇರಣೆ ದೊರೆಯಿತು. ಇದೇ ಸಮಯದಲ್ಲಿ ರಚನೆಯಾಗಿದ್ದು ‘ಹಚ್ಚೇವು ಕನ್ನಡದ ದೀಪ’. ‘ಭಾವತೀರ್ಥ’ದಲ್ಲಿ ಮಿಂದು ‘ನಕ್ಷತ್ರಗಾನ’ದಿ ಹಾಡಿ ‘ಗೀತಗೌರವ’ವಿತ್ತ ‘ಕಾವ್ಯರ್ಷಿ೧೯೮೪ ಜನೇವರಿ ೧೬ರಂದು ‘ಕರಕಿ ಕಣಗಿಲ’ ಹೂವಾಗಿ ಶಿವನಪಾದ ಸೇರಿತು. ಕವಿ ಇರದಿದ್ದರೂ ‘ಕಾವ್ಯ ಸೌರಭ’ ನಾಡನ್ನೆಲ್ಲಾ ವ್ಯಾಪಿಸಿದೆ.

ಡಾ.ಕರ್ಕಿಯವರು ಅಂತರಂಗ-ಬಹಿರಂಗ ಎರಡರಲ್ಲಿಯೂ ಪರಿಶುದ್ಧಿ ಹೊಂದಿದ್ದ ಕವಿವರ್ಯರು. ಕನ್ನಡವನ್ನ ತಮ್ಮ ಜೀವನದ ಉಸಿರಾಗಿಸಿಕೊಂಡಿದ್ದ ಅವರು ಬದುಕಿನು ದ್ದಕ್ಕೂ ಕಾವ್ಯವನ್ನೇ ಬಾಳಿದರು. ಪಾಂಡಿತ್ಯ, ಪ್ರತಿಭೆ, ಸಚ್ಚಾರಿತ್ರ್ಯದ ತ್ರಿವೇಣಿ ಸಂಗಮವಾ ಗಿದ್ದ ಕರ್ಕಿಯವರಿಗೆ ಅಗಣಿತ ಶಿಷ್ಯವೃಂದವೆ ಲಭಿಸಿತ್ತು. ಗಾಂಧೀಜಿ ದೇಶವನ್ನಗಲಿದ ಸಂದರ್ಭದಲ್ಲಿ ಬರೆದ ಈ ಕವಿತೆ ಕರ್ಕಿ ಯವರನ್ನು ನಾಡನ್ನಗಲಿದಾಗಲೂ ಪದೇ ಪದೇ ನೆನಪಾಗಿತ್ತು.


ತಿಳಿನೀಲದಲ್ಲಿ ತಾ ನೀಲವಾಗಿ ಅವ
ಹೋದ ದೂರ ದೂರ
ಬೆಳಗಿಹುದು ಇಲ್ಲಿ ಅವ ಬಿಟ್ಟ ಬೆಳಕು
ಇನ್ನೊಮ್ಮೆ ಏಕೆ ಬಾರ.

✍️ ಡಾ.ಲಿಂಗರಾಜ ರಾಮಾಪೂರ ಶಿಕ್ಷಕರು
ಸರಕಾರಿ ಪ್ರೌಢ ಶಾಲೆ, ಕಿರೇಸೂರ ತಾ. ಹುಬ್ಬಳ್ಳಿ