ವಿಷ್ಣು ಭಕ್ತನಾಗಿದ್ದ ನಾರಾಯಣಪ್ಪನಿಗೆ ಸ್ವತ: ವೀರನಾರಾಯಣ ದೇವರು ಕನಸಿನಲ್ಲಿ ಪ್ರತ್ಯಕ್ಷವಾಗಿ ನೀನು ಪ್ರತಿದಿನ ಮುಂಜಾನೆ ದೇವಸ್ಥಾನದ ಬಾವಿಯಲ್ಲಿ ಮುಳುಗು ಹಾಕಿ ಆ ಒದ್ದೆಯಾದ ಬಟ್ಟೆಯಲ್ಲಿಯೇ ದೇಗುಲದ ಕಂಬದ ಬಳಿ ಕುಳಿತು ನಾನು ಹೇಳುವ ಮಹಾಭಾರತವನ್ನು ಪುನರ್ ರಚಿಸಬೇಕು ಎಂದು ಹೇಳಿದನು. ಆದರೆ ಯಾವತ್ತೂ ನನ್ನನ್ನು ಹುಡುಕುವ ಪ್ರಯತ್ನ ಮಾಡಬಾರ ದು ಕೇವಲ ನನ್ನ ಧ್ವನಿಯನ್ನು ಕೇಳುತ್ತಾ ನೀನು ಕಾವ್ಯ ರಚನೆ ಮಾಡಬೇಕು ಎಂದು ಷರತ್ತು ವಿಧಿಸಿದನು. ಅಕಸ್ಮಾತ್ ನೀನು ಹಾಗೆ ಮಾಡದೆ ನನ್ನನ್ನು ಹುಡುಕುವ ಪ್ರಯತ್ನ ಮಾಡಿದರೆ ಮುಂದೆ ನಿನಗೆ ನಾನು ಅಥವಾ ನನ್ನ ಧ್ವನಿ ಕೇಳ ಸಿಗುವುದಿಲ್ಲ ಎಂದು ಎಚ್ಚರಿಕೆ ಕೂಡ ನೀಡಿದನು.

ದೇವರ ಮಾತಿನಂತೆ ಪ್ರತಿದಿನವೂ ನಾರಾಯಣಪ್ಪ ಬಾವಿಯಲ್ಲಿ ಮುಳುಗು ಹಾಕಿ ಅದೇ ಒದ್ದೆ ಬಟ್ಟೆಯಲ್ಲಿಯೇ ದೇಗುಲದ ಕಂಬದಬಳಿ ಕುಳಿತು, ದೇಗುಲದ ವಿಗ್ರಹದ ಹಿಂದಿನಿಂದ ಕೇಳಿ ಬರುವ ಧ್ವನಿ ಯನ್ನು ಆಲಿಸುತ್ತಾ ಮಹಾ ಭಾರತವನ್ನು ಬರೆಯಲಾರಂಭಿಸಿದ. ಒಂದೊಂದೇ ಪರ್ವ ಗಳು ಮುಗಿಯುತ್ತಾ ಸುಮಾರು ಹತ್ತುಪರ್ವ ಗಳ ಬರವಣಿಗೆ ಮುಗಿಯುತ್ತಾ ಬಂದಿತ್ತು. ಜೊತೆಗೆ ನಾರಾಯಣಪ್ಪನ ಕುತೂಹಲವು ಹೆಚ್ಚುತ್ತಾ ಹೋಗಿ ಒಂದು ದಿನ ನಿಧಾನವಾಗಿ ದೇಗುಲದ ಮೂರ್ತಿಯ ಹಿಂಭಾಗಕ್ಕೆ ಇಣುಕಿ ನೋಡಿದ. ತಕ್ಷಣವೇ ದೇವರ ಮೂರ್ತಿಯ ಹಿಂದೆ ಬರುತ್ತಿದ್ದ ಧ್ವನಿ ನಿಂತು ಹೋಯಿತು.

ಅದೇ ಕೊನೆ ಮುಂದೆಂದು ಆ ಧ್ವನಿ ಆ ದೈವ ಕಾಣಿಸಲೇ ಇಲ್ಲ…ಆಗ ಕವಿಗೆ ಅರಿವಾದದ್ದು ತನ್ನಿಂದ ವ್ಯಾಸಭಾರತವನ್ನು ಬರೆಸುತ್ತಿದ್ದದ್ದು ಸಾಕ್ಷಾತ್ ವೀರನಾರಾಯಣ ದೇವರೆಂದು. ಇದು ಕುಮಾರವ್ಯಾಸ ಎಂದು ಕನ್ನಡ ಸಾಹಿತ್ಯ ಲೋಕದಲ್ಲಿ ಪ್ರಸಿದ್ಧನಾದ ಗದುಗಿನ ನಾರಾಯಣಪ್ಪನ ಕಥೆ.

ಇಂದಿಗೂ ಕೂಡ ಗದುಗಿನಲ್ಲಿರುವ ವೀರ ನಾರಾಯಣ ದೇವಸ್ಥಾನದಲ್ಲಿ ಕುಮಾರ ವ್ಯಾಸನ ಕಂಬವಿದೆ, ಬಾವಿ ಇದೆ, ದೇಗುಲ ದಲ್ಲಿ ದೇವರ ವಿಗ್ರಹವಿದೆ.

ಹುಬ್ಬಳ್ಳಿ ಹತ್ತಿರದ ಕುಂದಗೋಳ ತಾಲೂಕಿನ ಕೋಳಿವಾಡ ಗ್ರಾಮದಲ್ಲಿ ಜನಿಸಿದ ಕುಮಾರವ್ಯಾಸನ ಮೂಲ ಹೆಸರು ನಾರಾಯಣಪ್ಪ. ಈತನ ಪೂರ್ವಜರು ಕೋಳಿವಾಡ ಗ್ರಾಮದ ಶಾನುಭೋಗರಾಗಿ ದ್ದರು. ಬಹಳ ಕಾಲದವರೆಗೆ ಕುಮಾರ ವ್ಯಾಸನ ಹುಟ್ಟೂರಿನ ಕುರಿತು ವಿವಾದಗ ಳಿದ್ದು, ಇತ್ತೀಚೆಗೆ ಎ.ವಿ.ಪ್ರಸನ್ನ ಎಂಬ ಸಂಶೋಧಕರಿಗೆ ಈ ಕುರಿತು ಇಂದಿಗೂ ಕೋಳಿವಾಡ ಗ್ರಾಮದಲ್ಲಿ ನೆಲೆಸಿರುವ ಕುಮಾರವ್ಯಾಸನ ವಂಶಜರು ದಾಖಲೆಗಳನ್ನ ತಾಳೆಗರಿಯ ಪ್ರತಿಗಳನ್ನು ನೀಡಿದ್ದು, ಕುಮಾರವ್ಯಾಸನ ಹುಟ್ಟೂರು ಕೋಳಿವಾಡ ಎಂಬುದನ್ನು ಪುಷ್ಠಿಗೊಳಿಸಿದ್ದಾರೆ. ವಿಜಯ ನಗರದ (ಹಂಪಿಯ) ಎರಡನೇಯ ದೇವರಾಯನ ಕಾಲದಲ್ಲಿ ಅಂದರೆ 14ನೇ ಶತಮಾನದ ಉತ್ತರಾರ್ಧ ಮತ್ತು 15ನೇಯ ಶತಮಾನದ ಪೂರ್ವಾರ್ಧದಲ್ಲಿ ಸುಮಾರು 70ವರ್ಷಗಳ ಕಾಲ ಈತ ಜೀವಿಸಿರಬಹುದು ಎಂಬ ಕುರುಹುಗಳಿವೆ.

ಕುಮಾರವ್ಯಾಸನು ಪ್ರಭುಲಿಂಗಲೀಲೆಯನ್ನು ರಚಿಸಿದ ಕವಿ ಚಾಮರಸನ ತಂಗಿಯ ಗಂಡ. ಈತನು ಶ್ರೀ ಕೃಷ್ಣದೇವರಾಯನ ಆಸ್ಥಾನ ದಲ್ಲಿ ಇದ್ದನೆಂದು ಹೇಳಲಾಗು ತ್ತದೆ. ತೊರವೆ ರಾಮಾಯಣ ರಚಿಸಿದ ತೊರವೆ ನರಹರಿ ರಾಯರು ಮತ್ತು ತಿಮ್ಮಣ್ಣ ಕವಿಯ ಸಮಕಾಲೀನನೆಂದು ಕೂಡ ಹೇಳಲಾಗು ತ್ತದೆ.ಗದುಗಿನ ವೀರನಾರಾಯಣ ದೇಗುಲದ ಬಳಿಯ ಶಾಸನದಲ್ಲಿಯೂ ಕೂಡ ಕುಮಾರ ವ್ಯಾಸನು ಇಲ್ಲಿಯೇ ನೆಲೆಸಿ ಭಾರತವನ್ನು ಬರೆದ ಕುರಿತು ಮಾಹಿತಿ ಇದೆ. ಪುರಂದರ ದಾಸರು ಕೂಡ:
ಹರಿಶರಣರೆನ್ನ ಮನೆಯ ಮೆಟ್ಟಲು ಪಾವನವಾಯಿತು ನಮ್ಮ ಮನೆ ನೋಡ
ಎಂದು ತಮ್ಮ ಸುಳಾದಿಗಳಲ್ಲಿ ಕುಮಾರ ವ್ಯಾಸರು ತಮ್ಮ ಮನೆಗೆ ಬಂದ ಮತ್ತು ಭಾರತವನ್ನು ಕುರಿತು ಮಾತನಾಡಿದ ಬಗ್ಗೆ ವಿವರಿಸಿದ್ದಾರೆ.

ವ್ಯಾಸ ಮಹಾಕವಿಯ ಸಂಸ್ಕೃತ ಮಹಾ ಭಾರತದ ಅತ್ಯದ್ಭುತ ಕನ್ನಡ ರೂಪವನ್ನು ರಚಿಸಿದ, ವ್ಯಾಸ ಮಹಾಕವಿಯ ಮಾನಸ ಪುತ್ರ ತಾನೆನ್ನುವ ವಿನೀತ ಭಾವದಿಂದ ನಾರಣಪ್ಪ ಕುಮಾರವ್ಯಾಸ ಎಂದು ತನ್ನನ್ನು ತಾನು ಕರೆದುಕೊಂಡಿದ್ದಾನೆ. ಅವರ ಕಾವ್ಯ ನಾಮವು ಕನ್ನಡದಲ್ಲಿ ಮಹಾಭಾರತದ ನಿರೂಪಣೆಯ ಶ್ರೇಷ್ಠ ಕೃತಿಯಾಗಿದೆ. ಕುಮಾರವ್ಯಾಸ ಎಂದರೆ “ಪುಟ್ಟ ವ್ಯಾಸ” ಅಥವಾ “ವ್ಯಾಸನ ಮಗ” ಎಂದರ್ಥ.

ಕುಮಾರವ್ಯಾಸನ ಅತಿ ಪ್ರಸಿದ್ಧ ಕೃತಿ ಕರ್ಣಾಟ ಭಾರತ ಕಥಾಮಂಜರಿ. ಇದಕ್ಕೆ ಗದುಗಿನ ಭಾರತ, ಕುಮಾರವ್ಯಾಸ ಭಾರತ ಎಂದು ಕೂಡ ಕರೆಯುತ್ತಾರೆ. ಮಹಾಕವಿ ವ್ಯಾಸರ ಸಂಸ್ಕೃತ ಮಹಾಭಾರತ ದ ಕನ್ನಡ ಅನುವಾದ ನಡುಗನ್ನಡ ದಲ್ಲಿದೆ. ಆದರೆ ಗದುಗಿನ ಭಾರತವನ್ನು ಕೇವಲ ಅನುವಾದವಾಗಿ ಉಳಿಸದೆ ಕುಮಾರವ್ಯಾಸ ತನ್ನ ಸಂಪೂರ್ಣ ಕಾವ್ಯಸಾಮರ್ಥ್ಯವನ್ನು ಈಕೃತಿಯಲ್ಲಿ ಸಂಪೂರ್ಣವಾಗಿ ಧಾರೆಯೆರೆ ದಿದ್ದಾನೆ. ಕನ್ನಡ ಸಾಹಿತ್ಯದ ಮೇರುಕೃತಿ ಯಾಗಿ ಪರಿಗಣಿತವಾಗಿರುವ ಕನ್ನಡ ಭಾರತ, ಸಂಸ್ಕೃತ ಮಹಾಭಾರತದ ಮೊದಲ ಹತ್ತು ಪರ್ವಗಳು, ೧೪೭ ಸಂಧಿ, ೭೯೭೧ ಪದ್ಯಗಳನ್ನು ಒಳಗೊಂಡಿದೆ.
‘ಕುಮಾರವ್ಯಾಸ ಭಾರತ’ ಕೃತಿಯ ಭಾಷೆ ನಡುಗನ್ನಡ. ಇದು ಮಹಾಭಾರತದ ಮೊದಲ ಹತ್ತುಪರ್ವಗಳ (ಅಧ್ಯಾಯಗಳು) ರೂಪಾಂತರ ವಾಗಿದೆ. ಶ್ರೀಕೃಷ್ಣನ ಭಕ್ತನಾದ ಕುಮಾರವ್ಯಾಸನು ತನ್ನ ಮಹಾಕಾವ್ಯವನ್ನು ಪಾಂಡವರಲ್ಲಿ ಹಿರಿಯನಾದ ಯುಧಿಷ್ಠಿರನ ಪಟ್ಟಾಭಿಷೇಕದೊಂದಿಗೆ ಕೊನೆಗೊಳಿಸು ತ್ತಾನೆ. ಈ ಕೃತಿ ತನ್ನ ಸಾರ್ವತ್ರಿಕ ಆಕರ್ಷಣೆಯಿಂದಾಗಿ ಕನ್ನಡ ಸಾಹಿತ್ಯದಲ್ಲಿ ಆಚರಿಸಲ್ಪಡುತ್ತದೆ.

ಗದುಗಿನ ಭಾರತವನ್ನು ಭಾಮಿನಿ ಷಟ್ಪದಿ ಯಲ್ಲಿ ರಚಿಸಲಾಗಿದೆ, ಇದು ಆರು ಸಾಲಿನ ಚರಣಗಳ ರೂಪವಾಗಿದೆ. ಕುಮಾರವ್ಯಾಸ ಮಾನವ ಭಾವನೆಗಳನ್ನು ಅತ್ಯಂತ ಆಪ್ತ ವಾಗಿ ಪರಿಶೋಧಿಸು ತ್ತಾನೆ, ಮೌಲ್ಯಗಳನ್ನು ಒರೆಗೆ ಹಚ್ಚುವ ಕೆಲಸ ಮಾಡುತ್ತಾನೆ ಮತ್ತು ಶಬ್ದಕೋಶದ ವಿಶಿಷ್ಟ ಜ್ಞಾನ ಹೊಂದಿದ್ದು, ಪಾಂಡಿತ್ಯವನ್ನು ಪ್ರದರ್ಶಿಸುತ್ತಾನೆ. ಈ ಕೃತಿ ಅತ್ಯಾಧುನಿಕ ರೂಪಕಗಳ ಬಳಕೆಗೆ ವಿಶೇಷ ವಾಗಿ ಹೆಸರುವಾಸಿಯಾಗಿದೆ. ಆದ್ದರಿಂದಲೇ ಕುಮಾರವ್ಯಾಸನನ್ನು ರೂಪಕ ಸಾಮ್ರಾಜ್ಯ ಚಕ್ರವರ್ತಿ ಎಂದು ಕರೆಯುತ್ತಾರೆ.
ಬವರವಾದರೆ ಹರನ ವದನಕೆ
ಬೆವರ ತಹೆನವಗಡಿಸುವೆನು ವಾಸ
ವನ ಸದೆವೆನು ಹೊಕ್ಕಡಹುದೆನಿಸುವೆನು ಮಾಧವನ
ಎಂಬ ಅಭಿಮನ್ಯುವಿನ ವೀರವಾಣಿಯನ್ನು 9ನೇ ತರಗತಿಯಲ್ಲಿ ನಾವು ಓದುತ್ತಿದ್ದಾಗ ನಮ್ಮ ಗುರುಗಳು ಪದ್ಯವನ್ನು ವಿವರಿಸಿ ಹೇಳುತ್ತಿದ್ದರೆ ಅಭಿಮನ್ಯುವಿನ ಕುರಿತ ಅಭಿಮಾನ, ಗೌರವ ಹೆಚ್ಚಿ ರೋಮಾಂಚನ ವುಂಟು ಮಾಡುತ್ತಿತ್ತು. ಇಂದಿಗೂ ಬಾಯಿ ಪಾಠವಾಗಿ ಇದನ್ನು ಬರೆಯುವಾಗ ನಮ್ಮನ್ನ ಈ ಮಟ್ಟಿಗೆ ಕುಮಾರವ್ಯಾಸ ಭಾರತದಲ್ಲಿ ತೇಲಿಸಿದ ಕನ್ನಡ ಭಾಷಾ ಶಿಕ್ಷಕರ ಪಠ್ಯ ವೈಖರಿ ಕಣ್ಣ ಮುಂದೆ ತೇಲಿದಂತಾಗುತ್ತದೆ.

ಕರ್ಣಾಟ ಭಾರತ ಕಥಾಮಂಜರಿಯನ್ನು ದಶಪರ್ವ ಭಾರತ ಎಂದು ಕರೆಯುತ್ತಾರೆ. ಏಕೆಂದರೆ ಇದು ಮೂಲ ಮಹಾಭಾರತದಲ್ಲಿ ಹದಿನೆಂಟಕ್ಕೆ ವಿರುದ್ಧ ವಾಗಿ ಕೇವಲ ಹತ್ತುಪರ್ವಗಳನ್ನು ಹೊಂದಿದ್ದು, ನಡುಗನ್ನಡ ಅಂದರೆ ಮಧ್ಯಯುಗದ ಕನ್ನಡ ಸಾಹಿತ್ಯದ ವಿಕಾಸದ ಹಂತಗಳಲ್ಲಿ ನಂತರದ ಕನ್ನಡ ಸಾಹಿತ್ಯದ ಮೇಲೆ ಕುಮಾರವ್ಯಾಸ ಭಾರತದ ಪ್ರಭಾವ ಗಮನಾರ್ಹವಾಗಿದೆ.
ಕುಮಾರವ್ಯಾಸನು ತನ್ನ ಕವನದಲ್ಲಿ:
“ರಾಜನು ಶೌರ್ಯವನ್ನು ಆನಂದಿಸು ತ್ತಾನೆ, ಬ್ರಾಹ್ಮಣನು ಎಲ್ಲಾ ವೇದಗಳ ಸಾರವನ್ನು, ತತ್ವಜ್ಞಾನಿ ಅಂತಿಮ ತತ್ವ ಶಾಸ್ತ್ರ, ಮಂತ್ರಿಗಳು ಮತ್ತು ರಾಜ್ಯ ಆಡಳಿತಗಾರರು ಆಡಳಿತದ ತಂತ್ರ ಮತ್ತು ಪ್ರೇಮಿಗಳು ಪ್ರಣಯ ಟಿಪ್ಪಣಿ ಗಳನ್ನು ಆನಂದಿಸುತ್ತಾರೆ”
ಎಂದು ಹೇಳಿದ್ದಾನೆ.
ಗದುಗಿನ ಭಾರತವನ್ನು ಇಂದಿಗೂ ವ್ಯಾಪಕ ವಾಗಿ ಓದಲಾಗುತ್ತದೆ. ಗಮಕ ಎಂದು ಕರೆಯಲ್ಪಡುವ ವಿಶಿಷ್ಟ ಶೈಲಿಯಲ್ಲಿ ಇದನ್ನು ಜನಪ್ರಿಯವಾಗಿ ಹಾಡಲಾಗುತ್ತದೆ. ಇತ್ತೀಚೆಗೆ ಗದಗ ಜಿಲ್ಲೆಯ ವಿವಿಧೆಡೆಗಳಲ್ಲಿ ಕುಮಾರ ವ್ಯಾಸನ ಭಾರತದ ಗಮಕ ವಾಚನವನ್ನು ತಿಂಗಳ ಪರ್ಯಂತ ಪ್ರಸ್ತುತ ಪಡಿಸಿದರು.

ಕುಮಾರವ್ಯಾಸನ ಮಹತ್ವವನ್ನು ಕನ್ನಡಿಗರಿಗೆ ಸಾರಲೆಂದೇ ಕವಿ ಕುವೆಂಪು ಅವರು:
ಕುಮಾರವ್ಯಾಸನು ಹಾಡಿದನೆಂದರೆ
ಕಲಿಯುಗ ದ್ವಾಪರವಾಗುವುದು
ಭಾರತ ಕಣ್ಣಲ್ಲಿ ಕುಣಿಯುವುದು
ಮಿಂಚಿನ ಹೊಳೆ ಕುಣಿದಾಡುವುದು
ಎಂದು ಹಾಡಿದ್ದಾರೆ. ಕನ್ನಡಕ್ಕೆ ಮಹಾಭಾರತ ವನ್ನು ತಂದುಕೊಟ್ಟ ಹಲವಾರು ರೂಪಕಗಳ ಮೂಲಕ ತಾನು ಬರೆದ ಗದ್ಯವನ್ನು ಅಜರಾ ಮರಗೊಳಿಸಿದ ಕುಮಾರವ್ಯಾಸನಿಗೆ ಆತನ ಜನ್ಮದಿನದಂದು ಕನ್ನಡ ಜನತೆಯ ಸಹಸ್ರ ಕೋಟಿ ನಮನಗಳು.
(ಜನವರಿ 5ರಂದು ಕುಮಾರವ್ಯಾಸನ ಜನ್ಮದಿನದ ನಿಮಿತ್ತ ಈ ಲೇಖನ)

ವೀಣಾ ಹೇಮಂತಗೌಡ ಪಾಟೀಲ್ ಮುಂಡರಗಿ, ಗದಗ

Nice
LikeLike