ಸಿದ್ಧ ದೀಪಾವಳಿಯ ಬುದ್ಧ
ರಾಜ್ಯ ಕೋಶಗಳ ಆಶಾಭಾವದ
ತಮಂದಕೆ ಜ್ಯೋತಿಯಾಗಿ
ಅಂತರಾಳವ ಬೆಳಗಿದರು ll೧ll

ವಚನ ವಿಚಾರ ದೀಪಾವಳಿಯ
ಬಸವಣ್ಣ ಮನದ ಮೌಢ್ಯಗಳ
ಬುಡದ ಕತ್ತಲೆಗೆ ವಿಚಾರದ ಕಿಡಿ
ಹೊತ್ತಿಸಿ ಜಗಜ್ಯೋತಿಯಾದರುll೨ll

ವಿವೇಕ ದೀಪಾವಳಿಯ
ನರೇಂದ್ರದತ್ತ ಭಯದಿ ಬೆಚ್ಚಿ
ಮುಚ್ಚಿ ಮುದುಡಿದ ದುರ್ಬಲ ಮನಗಳ
ಸಿಡಿಲಬ್ಬರ ನುಡಿಗಳಿಂದ ಮಿಂಚಿಸಿದರು ll೩ll

ಸ್ವತಂತ್ರ ದೀಪಾವಳಿಯ
ಗಾಂಧಿ ಗುಲಾಮಿತನದ ಕಗ್ಗತ್ತಲಿಗೆ
ಸತ್ಯಾಗ್ರಹ ಅಹಿಂಸೆ ಉಪವಾಸ
ಬಲದಿಂ ಚಳುವಳಿಯ ಕಿಡಿ ಹೊತ್ತಿಸಿದರು ll೪ll

ಅಕ್ಷರ ದೀಪಾವಳಿಯ
ಅಂಬೇಡ್ಕರ್ ಕ್ಷಣ ಕ್ಷಣಕ್ಕೂ
ಹೊತ್ತಿಗೆಯ ಸುತ್ತ ಪ್ರಜ್ವಲಿಸಿ
ಅಸಮ ಸಮಾಜಕ್ಕೆ ಬೆಂಕಿಯಾದರು ll೫||

ವರ್ಷಕ್ಕೊಮ್ಮೆ ದೀಪಾವಳಿ
ನಮ್ಮದು ಎಣ್ಣೆ ಬತ್ತಿಯ ದೀಪಕೆ
ಮನೆ ಬೆಳಗಿದವು ಮನಗಳಿಗೆ
ಅಂಟಿದ ಕಗ್ಗತ್ತಲು ಸರಿಯಲಿಲ್ಲll೬ll

✍🏻ಪರಸಪ್ಪ ತಳವಾರ
ಸಹಾಯಕ ಪ್ರಾಧ್ಯಾಪಕರು
ಸ.ಪ್ರ.ದ.ಕಾಲೇಜು, ಬಾಗಲಕೋಟೆ