ಮೈಸೂರು ಹಾಗು ಬೆಂಗಳೂರು ಸುತ್ತ ಮುತ್ತ ಗಂಗರು ನಿರ್ಮಾಣ ಮಾಡಿದ ಹಲವು ದೇವಾಲಯಗಳು ಕಾಣ ಸಿಗುತ್ತದೆ. ಗಂಗರ ನಿರ್ಮಾಣ ಸೇರಿದಂತೆ ಹಲವು ದೇವಾಲಯ ಗಳನ್ನು ತನ್ನ ಒಡಲಿನಲ್ಲಿ ಹೊತ್ತ ಊರೆಂದರೆ ತುಮಕೂರು ಜಿಲ್ಲೆಯ ಹೊನ್ನುಡಿಕೆ.

ಇತಿಹಾಸ ಪುಟದಲ್ಲಿ ಪ್ರಮುಖ ಗ್ರಾಮವಾಗಿ ಗುರುತಿಸಿಕೊಂಡಿರುವದಕ್ಕೆ ಇಲ್ಲಿ ಸಿಕ್ಕ ಸುಮಾರು 10 ಶಾಸನಗಳೇ ಸಾಕ್ಷಿ. ಗಂಗರ ಶ್ರೀ ವಿಕ್ರಮನ ಶಾಸನದಲ್ಲಿ ಪೊನ್ನುಡಿಕೆ ಎಂಬ ಉಲ್ಲೇಖವಿದೆ. ಇಲ್ಲಿನ ಶಾಸನವೊಂದರಲ್ಲಿ ಅಗ್ರಹಾರ ಗಂಧವರಣಾಪುರ ಹೊನ್ನುಡಿಕೆ ಎಂಬ ಉಲ್ಲೇಖ ನೋಡಬಹುದು. ಇಲ್ಲಿನ 1150 ರ ಶಾಸನದಲ್ಲಿ ಕೈಲಾಸೇಶ್ವರ ದೇವಾಲಯದ ಉಲ್ಲೇಖವಿದೆ. ಜನಾರ್ಧನ ದೇವಾಲಯದಲ್ಲಿನ 1166 ರ ಶಾಸನದಲ್ಲಿ ಹೊಯ್ಸಳ ದೊರೆ ನರಸಿಂಹನ ಕಾಲದಲ್ಲಿ ವೀಮರಸನಾಯಕ ಇಲ್ಲಿನ ವಿಮಾನ ವನ್ನು ಕಟ್ಟಿಸಿದ ಉಲ್ಲೇಖವಿದೆ. ಹೊಯ್ಸಳ ದೊರ ರಾಮನಾಥನ ಕಾಲದ ಎರಡು ಶಾಸನಗಳು ಜನಾರ್ಧನ ದೇವಾಲಯದಲ್ಲಿ ಸಿಕ್ಕಿದ್ದು ಇದರಲ್ಲಿ ಗಂಧವಾರಣಪುರವಾದ ಹೊನ್ನುಡಿಕೆಯ ಚೊಕ್ಕಪೆರುಮಾಳು ದೇವರಿಗೆ ದತ್ತಿ ನೀಡೀದ ಉಲ್ಲೇಖವಿದೆ.ಇನ್ನು ಕ್ರಿ.ಶ.1160 ರ ಶಾಸನದಲ್ಲಿ ಮಾಚಿಯಕ್ಕ ಎಂಬ ಹೆಗ್ಗಡಿತಿ ಮಂದರಿಗಿರಿಯಲ್ಲಿ ಬಸದಿ ನಿರ್ಮಿಸಿದ ಉಲ್ಲೇಖ ಇಲ್ಲಿನ ಶಾಸನ ದಲ್ಲಿದೆ. ಇಲ್ಲಿನ ಹಲವು ದೇವಾಲಯಗಳು ಇದು ಅತ್ಯಂತ ಪ್ರಮುಖ ಅಗ್ರಹಾರವಾಗಿತ್ತು ಎಂಬುದಕ್ಕೆ ಸಾಕ್ಷಿ. ಇನ್ನು ಸಮೀಪದಲ್ಲಿ ಜಲಗಾರ ದಿಬ್ಬದ ಬಳಿ ಸಿಕ್ಕ ಅವಶೇಷಗಳು, ಮಡಕೆಯ ಚೂರುಗಳು ಇಲ್ಲಿನ ಇತಿಹಾಸವನ್ನ ಪುರಾತನ ಕಾಲಕ್ಕೆ ಕೊಂಡು ಹೋಗುತ್ತೆ.

ಹೊನ್ನದೇವಿ ದೇವಾಲಯ

ಇಲ್ಲಿನ ಅತ್ಯಂತ ಪ್ರಾಚೀನ ದೇವಾಲಯವಾದ ಇದು ಸಂಪೂರ್ಣವಾಗಿ ನವೀಕರಣಗೊಂಡಿದೆ. ಕೆರೆಯ ಅಂಚಿನಲ್ಲಿ ಇರುವ ಈ ದೇವಾಲಯ ಗರ್ಭಗುಡಿ ಹಾಗು ವಿಶಾಲವಾದ ಮಂಟಪ (ನವರಂಗ) ಹೊಂದಿದ್ದು, ಗರ್ಭಗುಡಿಯಲ್ಲಿ ಪುರಾತನವಾದ ಹೊನ್ನದೇವಿಯ ಪ್ರತಿಮೆ ಇದೆ. ಅಸುರ ಮರ್ಧನ ಭಂಗಿಯಲ್ಲಿನ ಶಿಲ್ಪದ ಕೈಗಳಲ್ಲಿ ಗುರಾಣಿ, ಕತ್ತಿ, ತ್ರಿಶೂಲ, ಡಮರುಗ, ಪಾನಪಾತ್ರೆ ಹಾಗು ಅಭಯ ಹಸ್ತ ಇದ್ದು ಬಲಭಾಗದಲ್ಲಿ ದುರ್ಗಿ ಹಾಗು ಎಡ ಭಾಗದಲ್ಲಿ ಶಾರದೆಯ ಶಿಲ್ಪವಿದೆ.

ದೇವಾಲಯದ ಕಂಭಗಳಲ್ಲಿ ಗಂಗರ ಕಾಲದ ನಾಲ್ಕು ಕಂಭಗಳನ್ನು ಹಾಗೆಯೆ ಉಳಿಸಿ ಕೊಂಡಿದ್ದು ನವೀಕರಣ ಮಾಡಲಾಗಿದೆ. ನವ ರಂಗದಲ್ಲಿ ಪ್ರತ್ಯೇಕವಾದ ಎಂಟು ಗರ್ಭಗುಡಿ ಗಳನ್ನ ಸ್ಥಾಪಿಸಲಾಗಿದ್ದು ಇಲ್ಲಿ ಗಣಪತಿ ಹಾಗು ಸಪ್ತಮಾತೃಕೆಯರೆ ಶಿಲ್ಪಗಳನ್ನು ಇರಿಸಲಾಗಿದೆ. ಇದಕ್ಕೆ ಹೊಂದಿಕೊಂಡಂತೆ ವಿಶಾಲ ವಾದ ತೆರೆದ ಮಂಟಪವಿದ್ದು ಮುಂಚೆ ಒಳ ಭಾಗದಲ್ಲಿ ಇದ್ದ ನಂದಿಯನ್ನ ಇರಿಸಲಾಗಿದೆ. ದೇವಾಲಯದ ಹೊರಭಾಗದಲ್ಲಿ ಮೂಲ ದೇವಾಲಯದ ಅವಶೇಷಗಳನ್ನು ಹಾಕಲಾಗಿದ್ದು, ಅದನ್ನ ಕ್ರಮ ಬದ್ದವಾಗಿ ಜೋಡಿಸಿದಲ್ಲಿ ಇತಿಹಾಸದ ಅಧ್ಯಯನಕ್ಕೆ ಅನುಕೂಲ.

ಜನರ್ಧಾನ ದೇವಾಲಯ

ಚೋಳರ ಶೈಲಿಯಲ್ಲಿ ನಿರ್ಮಾಣವಾದ ದೇವಾಲಯ ಎನ್ನಲಾದರೂ ಹೊಯ್ಸಳರ ಕಾಲದ ಹಲವು ಶಾಸನಗಳು ಇರುವ ಹಿನ್ನೆಲೆ ಯಲ್ಲಿ ಹೊಯ್ಸಳರ ಕಾಲದಲ್ಲಿ ನಿರ್ಮಾಣ ವಾದ ದೇವಾಲಯ ಎನ್ನಬಹುದು. ಶಾಸನಗಳಲ್ಲಿ ಚೊಕ್ಕಪ್ಪೆರುಮಾಳು ಎಂದೇ ಕರೆದಿರುವ ಹಿನ್ನೆಲೆ ಯಲ್ಲಿ ಚೋಳರ ಕಾಲದಲ್ಲಿ ನವೀಕರಣದ ಸಾಧ್ಯತೆಗಳಿವೆ. ಸುಮಾರು 12 ನೇ ಶತಮಾನದ ಕಾಲದಲ್ಲಿ ನಿರ್ಮಾಣವಾದ ಈ ದೇವಾಲಯ ಗರ್ಭಗುಡಿ, ಸುಖನಾಸಿ, ಪ್ರದಕ್ಶಿಣೆ ಪಥ, ನವರಂಗ, ಮಂಟಪ ಹಾಗು ಪ್ರವೇಶ ಮಂಟಪ ವನ್ನು ಹೊಂದಿದೆ. ಇನ್ನು ಗರ್ಭಗುಡಿಯಲ್ಲಿ ನಂತರ ಕಾಲದಲ್ಲಿ ಬದಲಾದ ಜನರ್ಧಾನ ಶಿಲ್ಪವಿದ್ದು ಚಕ್ರ, ಶಂಖ, ಗಧಾ ಹಾಗು ಅಭಯ ಹಸ್ತಧಾರಿಯಾಗಿದ್ದಾನೆ. ಶಿಥಿಲಗೊಂಡಿದ್ದ ದೇವಾಲಯವನ್ನು 2011 ರಲ್ಲಿ ಧರ್ಮಸ್ಥಳ ಧರ್ಮೋತ್ಥಾನ ಟ್ರಸ್ಟ್ ಸಹಕಾರದೊಂದಿಗೆ 2011 ರಲ್ಲಿ ಜೀರ್ಣೋದ್ದಾರ ಮಾಡಲಾಗಿದೆ.

ದೇವಾಲಯದಲ್ಲಿನ ನವರಂಗ, ಮಂಟಪ ಹಾಗು ಪ್ರವೇಶ ಮಂಟಪದಲ್ಲಿ ಕಂಭಗಳಿದ್ದು ಯಾವುದೇ ಉಬ್ಬು ಶಿಲ್ಪಗಳ ಕೆತ್ತೆನೆ ಕಾಣ ಬರುವದಿಲ್ಲ. ಮಂಟಪದಲ್ಲಿ ಆಳ್ವಾರ ಹಾಗೂ ರಾಮಾನುಜಾಚಾರ್ಯರ ಪ್ರತಿಮೆಗಳನ್ನು ನೋಡಬಹುದು.

ಕೈಲಾಸೇಶ್ವರ ದೇವಾಲಯ

ಗಂಗರ ಕಾಲದ ಈ ದೇವಾಲಯ ಗರ್ಭಗುಡಿ, ಸುಕನಾಸಿ, ನವರಂಗ ಹೊಂದಿದ್ದು ಗರ್ಭಗುಡಿ ಯಲ್ಲಿ ಶಿವಲಿಂಗವಿದ್ದು, ಶಿವನ ಎದುರು ನಂದಿ ಇದೆ. ಇಲ್ಲಿ ಗಂಗರ ಕಾಲಕ್ಕೆ ಸೇರಿದ ಗಣಪತಿ ಹಾಗು ನಾಗ ಶಿಲ್ಪಗಳು ಗಮನ ಸೆಳೆಯುತ್ತದೆ. ನವಂಗದಲ್ಲಿ ಹೊನ್ನಾದೇವಿಯ ಉತ್ಸವ ಮೂರ್ತಿ ಯನ್ನ ಇರಿಸಲಾಗಿದೆ. ಈ ದೇವಾಲಯ ಸುಮಾರು ಕ್ರಿ.ಶ 1150 ರಲ್ಲಿ ಪುನರ್ ನಿರ್ಮಾಣ ವಾಗಿದ್ದ ಉಲ್ಲೇಖವಿದೆ. ದೇವಾಲಯದ ಹೊರ ಭಿತ್ತಿಯಲ್ಲಿ ಅಲಂಕರಣಗಳಿಲ್ಲ. ದೇವಾಲಯಕ್ಕೆ ಚಿಕ್ಕದಾದ ಪ್ರವೇಶ ಮಂಟಪವಿದ್ದು ಹೊನ್ನುಡಿಕೆಯ ಪುರಾತನ ದೇವಾಲಯಗಳಲ್ಲಿ ಒಂದು.

ಬಸವೇಶ್ವರ ದೇವಾಲಯ

ಸುಂದರವಾದ ಮೂರು ಅಡಿ ಎತ್ತರದ ಬಸವನ ಶಿಲ್ಪವನ್ನು ಹೊಂದಿರುವ ದೇವಾಲಯ ಊರ ಮಧ್ಯದಲ್ಲಿದೆ. ಶಿಥಿಲವಾಗಿದ್ದ ಈ ದೇವಾಲಯ ವನ್ನು ನವೀಕರಣ ಮಾಡಲಾಗಿದ್ದು ಸಾಕಷ್ಟು ಜನರು ಇಲ್ಲಿಗೆ ಬರುತ್ತಾರೆ.

ತಲುಪವ ಬಗ್ಗೆ : ಹೊನ್ನುಡಿಕೆ ತುಮಕೂರಿ ನಿಂದ ಸುಮಾರು ತುಮಕೂರಿನಿಂದ ಸುಮಾರು 19 ಕಿ.ಮೀ. ದೂರದಲ್ಲಿ ಶಿವಗಂಗೆಯಿಂದ ಸುಮಾರು 17 ಕಿ.ಮೀ ಹಾಗು ಬೆಂಗಳೂರಿನಿಂದ ಸುಮಾರು 60 ಕಿ ಮೀ ದೂರದಲ್ಲಿದ್ದು, ಆಲದಹಳ್ಳಿ ಅಥವಾ ಡಾಬಸ್ ಪೇಟೆ ಮಾರ್ಗವಾಗಿಯೂ ತಲುಪಬಹುದು. (ತುಮಕೂರು ರಸ್ತೆ)

✍️ಶ್ರೀನಿವಾಸಮೂರ್ತಿ.ಎನ್.ಎಸ್.
ಬೆಂಗಳೂರು