ನಮ್ಮ ನಡುವಿನ ಗೋಡೆ ಬೆಳೆಯುತ್ತಲೇ ಇರುತ್ತದೆ
ಈ ಸಂಕವೋ ಮುರಿಮುರಿದು ಬೀಳುತ್ತಲೇ ಇರುತ್ತದೆ

ಎಷ್ಟೊಂದು ಸಲ ನೆಟ್ಟಿದ್ದೇನೆ ಇಲ್ಲಿ ಸಸಿಯನ್ನು ನಾನು
ಬೇರನ್ನು ಗೆದ್ದಲು ಹಿಡಿದು ಮುಕ್ಕುತ್ತಲೇ ಇರುತ್ತದೆ

ಒಮ್ಮೆ ರಾಗದ ಮಳೆ ಮತ್ತೆ ಬೆಂಕಿಯ ಹೊಳೆ
ಯಾಕೆ ಈ ಭಿತ್ತಿ ಹೀಗೆ ಬದಲುತ್ತಲೇ ಇರುತ್ತದೆ

ಕನಸಿನಲ್ಲಿ ಎಚ್ಚರದಲ್ಲಿ ಕಾಡುತ್ತಲೇ ಇದೆ, ದನಿ
ಹುಡುಕಿ ಹೋದರೆ ಸಿಗದೆ ಓಡುತ್ತಲೇ ಇರುತ್ತದೆ

ವಿವಶತೆಯಲ್ಲಿ ತೊಳಲಿ ದಣಿದಿದ್ದಾನೆ ‘ಜಂಗಮ’
ಆ ಲೋಕದಿಂದ ನಿನ್ನ ಕಣ್ಣು ಕರೆಯುತ್ತಲೇ ಇರುತ್ತದೆ

✍️ ಡಾ.ಗೋವಿಂದ ಹೆಗಡೆ
ಹುಬ್ಬಳ್ಳಿ