ಕಬಂಧ ಬಾಹುಗಳ ಆಚೆ ಈಚೆಯ
ನನ್ನ ತುಮುಲುಗಳೊಳಗೆ
ಹೆಣೆದುಕೊಂಡು ನನ್ನೊಳಗೆ ಪ್ರಶ್ನಿಸುತ್ತಿದ್ದೇನೆ ಅವರಂತಾಗಲೇ?
ರಾಮನ ಸ್ಪರ್ಶಕ್ಕೆ ಶಿಲೆ ಬಲೆ ಹರಿದುದಷ್ಟೇ
ಹದಿಬದೆಯಾದರೂ ಅಹಲ್ಯೆ ಹೆಣ್ಣಾಗಲಿಲ್ಲ.
ಸತ್ಯಕ್ಕಾಗಿ ಸಂತೆಯಲ್ಲಿ ಬಿಕರಿ ಗೊಂಡರೂ ಚಂದ್ರಮತಿಯ ಅಸ್ಮಿತೆ ಮಣ್ಣಾಗಲಿಲ್ಲ.
ಅಗಸನ ಮಾತಿಗೆ ರಾಮನ ನೀತಿಗೆ ಅಗ್ನಿ
ಪ್ರವೇಶಿಸಿದರು ಸೀತೆ ಬೂದಿಯಾಗಲಿಲ್ಲ.
ಜೂಜಿನ ಸರಕಾಗಿ ಸೀರೆ ಸೇಳಿಸಿಕೊಂಡರು ಮಾನಿನಿಯಾದ ದ್ರೌಪತಿ ಕರಗಿ ನೀರಾಗಲಿಲ್ಲ.
ಕಣ್ಣಪಟ್ಟಿಯ ಒಳಗೂ ಸಾವಿರದ ಬೆಳಕು ಕಂಡ ಮಹಾಸಾಧ್ವಿ ಗಾಂಧಾರಿ ಕುರುಡಿಯಾಗಲಿಲ್ಲ.
ಪುರಾಣಗಳ ಸಾವಿತ್ರಿ, ತಾರಾ, ಭಾನು, ದಮಯಂತಿ ಇವರಂತೆ ಬೂದಿ, ಮಣ್ಣು ,ನೀರಾಗಿ ಹರಿಯ ಬೇಕಿಲ್ಲ.
ನಾನು ನನ್ನೊಳಗಿನ ಹೆಣ್ತನದ ಒಟ್ಟು ಮೊತ್ತ
ನನಗೋ ಬರಿ ಮಾನವಳಾಗುವ ತವಕ.
ಒಂದೊಮ್ಮೆ ಕಥೆ ಆಗದಿದ್ದರೆ
ಇತಿಹಾಸ, ಪುರಾಣ, ಚರಿತ್ರೆಯಾಗುವದಂತೂ ಬೇಡ. ನಾನು ಮಾನವ್ಯದ ಬೀಜವಾದರೂ ಸಾಕು.

✍️ಡಾ.ಮೈತ್ರೇಯಿಣಿ ಗದಿಗೆಪ್ಪಗೌಡರ
ಬೆಳಗಾವಿ