ನಿನ್ನುಸಿರು ಸೋಕಿ..
ಬಿದಿರು ಮಧುರ
ಮುರಳಿಯಾಯಿತು.!
ನಿನ್ನಸ್ಪರ್ಷ ತಾಕಿ
ಅಗುಳು ಅಕ್ಷಯ
ರಾಶಿಯಾಯಿತು.!
ನಿನ್ನೊಲವು ದಕ್ಕಿ
ತುಳಸಿ ದಳವು
ಪವಿತ್ರವಾಯಿತು.!
ನಿನ್ನ ಶಿರವನೇರಿ
ನವಿಲುಗರಿಯೂ
ಕಿರೀಟವಾಯಿತು.!
ನಿನ್ನಸ್ನೇಹ ದೊರಕಿ
ಕುಚೇಲನು ಕೂಡ
ಕುಬೇರನಾದನು.!
ನಿನ್ನಗೀತೆ ಕೇಳಿ
ನರನು ಕೂಡ
ಧನ್ಯಮಾನ್ಯನಾದನು.!
ನಿನ್ನ ಪ್ರತಿನಡೆಯೂ
ಸತ್ಯ, ಸತ್ವವಾಯಿತು
ಬದುಕಿಗೆ ತತ್ವವಾಯಿತು.!
ಕೃಷ್ಣ ನಿನ್ನಗಾರುಡಿ
ಯುಗದ ನೀತಿಯಾಯ್ತು.!
ಜಗಕೆ ಜ್ಯೋತಿಯಾಯ್ತು.!
ಎ.ಎನ್.ರಮೇಶ್. ಗುಬ್ಬಿ.