ಒಂದು ಬಿಲದೊಳಗೆ ಎರಡು ಇಲಿಗಳು ವಾಸವಾಗಿದ್ದವು.. ಗಂಡು ಇಲಿ ನಿತ್ಯ ಆಹಾರ ಹುಡುಕಲು ಹೋಗುತ್ತಿತ್ತು. ಬರುವಾಗ ಹೆಂಡತಿಗೂ ತರುತ್ತಿತ್ತು. ಹೆಣ್ಣು ಇಲಿ ನಾನು ಬರಲೇ ಎಂದು ಕೇಳಿದರೂ ಗಂಡಿಲಿ ಒಪ್ಪುತ್ತಿರಲಿಲ್ಲ. ಹೆಣ್ಣು ಇಲಿ ಬಿಲ ವನ್ನು ಕೊರೆಯುವುದು ಮತ್ತು ಬಲವಾಗಿಸು ವುದರಲ್ಲಿ ಸಮಯ ಕಳೆಯುತ್ತಿತ್ತು.ಒಂದಿನ ಹಾಗೆ ಬಿಲವನ್ನು ಕೊರೆಯುತ್ತಿರು ವಾಗ ಅತ್ತ ಕಡೆಯಿಂದ ಬಿಲ ಕೊರೆಯುತ್ತಿದ್ದ ಇನ್ನೊಂದು ಇಲಿ ಎದುರಾಯಿತು. ಆ ಇಲಿಯನ್ನು ಕಂಡು ಈ ಇಲಿ ಖುಷಿಪಟ್ಟಿತು. ಸರಿಯಾಗಿ ಗಮನಿ ಸಿದಾಗ ಆ ಇಲಿ ಒಂದು ಕಾಲು ಊನವಾಗಿರುವುದು ಕಾಣಿಸಿತು. ‘ಒಹ್ ಇದು ಕುಂಟಿಲಿ’ ಎಂದು ಕೊಂಡಿತು. ಕುಂಟಿಲಿಯ ಜೊತೆ ಮಾತಿಗಿಳಿಯಿತು.
‘ನೀನು ಎಲ್ಲಿಂದ ಬಂದೆ..? ಈ ಬಿಲದಲ್ಲಿ ಒಬ್ಬಳೇ ಇರುತ್ತಿಯಾ..’ ಎಂದು ಕೇಳಿತು. ಆಗ ಕುಂಟಿಲಿ ದುಃಖದಿಂದ ‘ಹೌದು ನಾನು ಈಗ ಒಂಟಿಯಾಗಿದ್ದೇನೆ.ನನ್ನ ಅಪ್ಪ, ಅಮ್ಮ ಅಣ್ಣಂದಿರನ್ನು ಸರ್ಪವೊಂದು ನುಂಗಿ ಬಿಟ್ಟಿ ತು. ನಾನು ಜೀವ ಉಳಿಸಿಕೊಳ್ಳಲು ಆ ಮರದ ಬುಡವನ್ನು ತೊರೆದು ಇಲ್ಲಿ ‘ಬಿಲ ಕೊರೆಯಲಾರಂಬಿಸಿದೆ’ ಎಂದಿತು. ಕುಂಟಿಲಿ ಯ ಸ್ಥಿತಿಗೆ ಮರುಕಪಟ್ಟ ಹೆಣ್ಣಿಲಿ ‘ನಿನ್ನ ಕಾಲಿಗೇನಾಯಿತು..?’ ಎಂದು ಕೇಳಿತು. ಆಗ ಕುಂಟಿಲಿ ‘ಏನೆಂದು ಹೇಳಲಿ.. ಆ ಹಿತ್ತಿಲಿನ ಮರದದಿಂದ ಈ ಬೆಟ್ಟದ ಕಡೆ ಬರುವಾಗಿ ಬೆಕ್ಕೊಂದು ನನ್ನನ್ನು ಹಿಡಿದೇ ಬಿಟ್ಟಿತು. ನನ್ನ ಕಥೆಯು ಮುಗಿಯಿತು ಎಂದು ಕೊಂಡಿದ್ದೆ. ಬೆಕ್ಕು ನನ್ನನ್ನು ಆಡಿಸತೊಡಗಿತು .. ಆ ಸಮಯದಲ್ಲಿ ನಾನು ಓಡಲು ಯತ್ನಿಸಿದಾಗ ನನ್ನ ಕಾಲನ್ನು ಕಚ್ಚಿತು. ಅದೇ ಸಮಯದಲ್ಲಿ ಇನ್ನೆರಡು ಬೆಕ್ಕುಗಳು ಅಲ್ಲಿಗೆ ಬಂದವು. ಅವುಗಳ ನಡುವೆ ಜಗಳ ಹತ್ತತು. ಆಗ ನಾನು ಅಲ್ಲೇ ಇದ್ದ ಸಣ್ಣ ಬಿಲದೊಳಗೆ ಜಾರಿಕೊಂಡು ಬಚಾವಾದೆ’ ಎಂದಿತು.
ಆಗ ಹೆಣ್ಣಿಲಿಗೆ ಹೊರಗಿನ ಬದುಕು ಅಷ್ಟು ಸುಲಭವಲ್ಲ. ಅಲ್ಲಿ ನಮಗೆ ಸಾಕಷ್ಟು ವೈರಿಗಳಿದ್ದಾರೆ ಎಂದು ಗಂಡಿಲಿ ಹೇಳುತ್ತಿದ್ದ ಮಾತು ನೆನಪಾಯಿತು. ಕುಂಟಿಲಿ ಸ್ಥಿತಿಗೆ ಮರುಕಪಟ್ಟ ಹೆಣ್ಣಲಿ ಮಗು ಭಯಪಡ ಬೇಡ. ನೀವು ನಮ್ಮ ಜೊತೆಯಲ್ಲಿ ಇರು ಎಂದಿತು. ಗಂಡಿಲಿ ತಂದು ಸಂಗ್ರಹಿಸುತ್ತಿದ್ದ ಕಾಳುಗಳನ್ನು ಕುಂಟಿಲಿಗೂ ನೀಡುತ್ತಿತ್ತು. ಹೀಗೆ ಮೂವರು ಆ ಬಿಲದಲ್ಲಿ ಸಂತೋಷ ವಾಗಿದ್ದರು.
ಹೀಗಿರುವಾಗ ಒಂದು ದಿನ ಹಾವೊಂದು ಇಲಿಗಳ ವಾಸನೆ ಗ್ರಹಿಸಿ ಬಿಲದೊಳಗೆ ನುಗ್ಗಿಯೇ ಬಿಟ್ಟಿತು. ಕುಂಟಿಲಿ ಹೆಣ್ಣಿಲಿ ಭಯ ಬಿದ್ದರು. ಇನ್ನೊಂದು ದಾರಿಯಲ್ಲಿ ಪಾರಾಗ ಬೇಕೆಂದುಕೊಂಡರೆ ಅಲ್ಲಿ ಮಣ್ಣು ಕುಸಿದು ದಾರಿ ಮುಚ್ಚಿಹೋಗಿತ್ತು. ದಾರಿ ಕಾಣದೇ ಹೆಣ್ಣಿಲಿ ನಮ್ಮ ಕಥೆ ಮುಗಿಯಿತು ಎಂದು ಚೀರಿತು. ಆಗ ಕುಂಟಿಲಿ ನಮ್ಮಿಬ್ಬರಲ್ಲಿ ಒಬ್ಬರು ಹಾವಿಗೆ ಆಹಾರವಾದರೂ ಇನ್ನೊ ಬ್ಬರು ಉಳಿಯಬಹುದು. ನೀವು ಇಷ್ಟು ದಿನ ನನ್ನ ಸಾಕಿಸಲಹಿದ್ದಿರಿ. ನಾನು ಕುಂಟಿ ಯಾದ್ದರಿಂದ ನಾನು ಆಹಾರ ಹುಡುಕಲೆಂ ದು ಹೊರಹೋದರೆ ಯಾವುದಾದರೂ ಪ್ರಾಣಿಗೆ ಬಲಿಯಾಗುತ್ತೇನೆ. ಆದ್ದರಿಂದ ನಾನೇ ಹಾವಿಗೆ ಆಹಾರವಾಗುತ್ತೇನೆ, ನೀವು ಬದುಕಿ ಎಂದು ಹೆಣ್ಣಿಲಿಯನ್ನು ಬಿಲ ಚಿಕ್ಕ ಸಂಧಿಯಲ್ಲಿ ತೂರಿ ತಾನು ಹಾವಿಗೆ ಎದು ರಾಗಿ ನಿಂತಿತು. ಹಾವು ಅದನ್ನು ಕಚ್ಚಿಕೊಂ ಡು ಬಿಲದಿಂದ ಹೊರಬಂದು ಕುಂಟಿಲಿ ಯನ್ನು ತಿಂದೇ ಬಿಟ್ಟಿತು. ಹೆಣ್ಣಿಲಿ ಅಡ್ಡಬಿಲ ಕೊರೆದು ಬಚ್ಚಿಟ್ಟುಕೊಂಡಿತು. ಹಾವು ಮತ್ತೆ ಬಿಲದೊಳಕ್ಕೆ ಬಂದರೂ ಹೆಣ್ಣಿಲಿ ಸಿಗದೇ ಬಚಾವಾಯಿತು.
ಗಂಡಿಲಿ ಬಂದಕೂಡಲೇ ಘಟನೆ ತನಗಾಗಿ ಪ್ರಾಣತ್ಯಾಗ ಮಾಡಿದ ಕುಂಟಿಲಿಯ ನೆನೆದು ಕಣ್ಣೀರು ಹಾಕಿತು. ಇಬ್ಬರೂ ನಿತ್ಯವೂ ಕುಂಟಿಲಿಯ ಉಪಕಾರ ಸ್ಮರಿಸುತ್ತಿದ್ದರು.
✍️ರೇಖಾ ಭಟ್, ಹೊನ್ನಗದ್ದೆ
ಮಕ್ಕಳಿಗೆ ತ್ಯಾಗ ಎಂದರೇನು ಎಂದು ಕಲಿಸುವ ಅದ್ಭುತ ಕಥೆ…ತುಂಬಾ ಚೆನ್ನಾಗಿದೆ ಗೆಳತಿ…👏👏👍
LikeLike
Heart❤ touching nice👍
LikeLike
ತ್ಯಾಗ ಬದುಕಿಗೆ ಬೇಕು…ನೈಸ್
LikeLike