ದುಡಿದು ದುಡಿದು ನೀ ಮೌನಿಯಾದೆ
ಮೌನದಲಿ ಮನೆಯ ಕಟ್ಟಿದೆ
ನಿನ್ನ ಹೆಗಲ ಮೇಲೆ ಅದೆಷ್ಟು ಹೊರೆ!
ಹೊರೆ ಹೊತ್ತು ಬಹು ದೂರ ನಡೆದೆ
ನಿನ್ನ ಅಂತರಂಗ ತಿಳಿಯದಾದೆವು
ಹೊತ್ತ ಹೊರೆಯ ಇಳುಹಿಕೊಳ್ಳುವುದರೊಳಗೆ
ಹೊರೆಯಾಗದಂತೆ ಹೊರಟೇ ಹೋದೆ
ಮೌನದಲಿ ನಡದೇ ಬಿಟ್ಟೆ
ಖಾಕಿಯ ತೊಟ್ಟು ಶ್ರದ್ಧೆಯ ಮೆರೆದೆ
ಹ್ಯಾಟು ಬೂಟುಗಳ ನಡುವೆ
ದರ್ಪವಿಲ್ಲದ ಅಧಿಕಾರಿಯಾದೆ
ಕರುಣೆಯ ತೊರೆಯದೆ ಖೈದಿಗಳ ಕಾದೆ
ಕರ್ತವ್ಯದ ಕಿಚ್ಚಿಗೆ
ಪ್ರಾಮಾಣಿಕತೆಯ ಗಂಧ ಬಳಿದೆ
ಮಡದಿಯ ಕೈ ರುಚಿಗೆ ಸೋತೆ
ಹೆಣ್ಣುಮಕ್ಕಳಲ್ಲೇ ಹೆತ್ತ ತಾಯಿಯ ಕಂಡೆ
ಗೃಹಕ್ಕೆ ಗೃಹಸ್ಥನಾದೆ
ನಮ್ಮ ಮಡಿಲ ಮಕ್ಕಳಿಗೆ ಅಜ್ಜನಾದೆ
ಕಣ್ಣಲ್ಲೇ ಮಾತಾಡಿದೆ ಮೌನವಾಗೇ ಉಳಿದೆ
ನೀನಿತ್ತ ಪಾಠವಿಂದು ಬಾಳಪುಟದ ಮೊದಲಿಗಿದೆ
ಅಪ್ಪ ನೀ ಎಂದರೆ ಆಲದ ಮರವೇ
ನಿನ್ನೆದೆಯ ಮುಗಿಲ ತುಂಬ ನಗುವ ನಕ್ಷತ್ರಗಳೇ
✍️ಡಾ.ಪುಷ್ಪಾ ಶಲವಡಿಮಠ, ಹಾವೇರಿ
ಲೇಖನ
ಪತ್ರಿಕಾ ಪ್ರಕಟಣೆಗಾಗಿ
*ಸಸಿ ನೆಟ್ಟು ಪರಿಸರ ಸಂರಕ್ಷಣೆಗೆ ಪಣ ತೊಡೋಣ*
ಜೂನ್ ಮಾಹೆ ವರ್ಷದಲ್ಲಿ ಅತಿ ಮುಖ್ಯವಾದ ತಿಂಗಳು ಜನರು ಪಶು ಪಕ್ಷಿಗಳು ಕ್ರಿಮಿ ಕೀಟಗಳು ಅತಿ ಉಲ್ಲಾಸದಿಂದ ಚಟುವಟಿಕೆಯಿಂದ ಆನಂದಿಂದ ಜೀವನ ಕಳೆಯುವ ಸಮಯ. ಪ್ರಕೃತಿಯಲ್ಲಿ ಏನೋ ಒಂಥರದ ಹೊಸ ಚೈತನ್ಯ . ಕಾರಣ ಉರಿ ಉರಿ ಬಿಸಿಲಿನಿಂದ ಬೆವರಿ ಬೆಂಡಾಗಿ ಮನೆ ಮನೆಗಳಲ್ಲಿ ಅಡಗಿದ್ದ ಜೀವಿಗಳೆಲ್ಲಿ ಹೊರ ಬಂದು ಹೊಸ ಜೀವನವನ್ನು ಆರಂಭಿಸುವ ಸಮಯ. ( ಈ ಬಾರಿ ಕೊರೋನಾ ಬಂದದ್ದರಿಂದ ಬೆಸಿಗೆ ಮತ್ತು ಮಳೆಗಾಲದ ಪ್ರಾರಂಭದ ದಿನಗಳನ್ನು ಮನೆಯಲ್ಲಿಯೇ ಕಳೆದಿದ್ದೇವೆ.)
ಮುಂಗಾರಿನಮಳೆಯ ಆರಂಭವು ಈ ಹೊಸ ಬದಲಾವಣೆಗೆ ಕಾರಣವಾಗಿರುತ್ತದೆ. ವಸಂತ ಕಾಲಾರಾಂಭವು ಈ ವಾತಾವರಣಕ್ಕೆ ನಾಂದಿಯಾಡಿರುತ್ತದೆ. ಕೂಡಿಟ್ಟ ವರ್ಷದ ಬಾನ ಖಾಲಿಯಾದ್ದರಿಂದ ರೈತರೆಲ್ಲಾ ತಮ್ಮ ತಮ್ಮ ದನಕರುಗಳೊಂದಿಗೆ ಹೊಲ ಗದ್ದೆಗಳಲ್ಲಿ ಮತ್ತೆ ವರ್ಷದ ಊಟಕ್ಕಾಗಿ ಬಿತ್ತನೆಯ ಕಾರ್ಯಕ್ಕೆ ನಾಂದಿಯಾಡುತ್ತಾರೆ. ಪಕ್ಷಿಗಳೆಲ್ಲಾ ಅಹಾರಕ್ಕಾಗಿ ಹೊರ ಹೊರಡುತ್ತವೆ.
ಯಥೇಚ್ಚ ಮಳೆಯಿಂದ ಎಲ್ಲೆಂದರಲ್ಲಿ ನೀರೋ ನೀರು. ಇದಕ್ಕೆಲ್ಲಾ ಕಾರಣ ಹಚ್ಚ ಹಸುರಿನ ಪರಿಸರ. ಗಿಡಮರಗಳು ಬಳ್ಳಿಗಳು ನದಿ ತೊರೆಗಳು ಬೀಸುವ ತಂಪಾದ ಮತ್ತು ಉಲ್ಲಾಸದ ಗಾಳಿಯು ಇಡೀ ವಾತಾವರಣವನ್ನೇ ಮನಮೋಹಕಗೊಳಿಸಿರುತ್ತದೆ.ಅಂದರೆ ಪರಿಸರ ಹಸಿರಿನ ಸಮೃದ್ದಿಯಿಂದ ಕೂಡಿದಾಗ ಎಲ್ಲವೂ ಸೌಖ್ಯ. ಯಾವುದೇ ರೋಗಗಳು ಬಾಧಿಸವು. ಯಾವುದೇ ಅನಾರೋಗ್ಯ ಕಾಡವು. ಮನೋಲ್ಲಾಸದ ವಾತಾವರಣ ಸುಸ್ಥಿರ ಸಮಾಜವನ್ನು ಕಾಪಿಟ್ಟುಕೊಳ್ಳುತ್ತದೆ. ಸ್ವಚ್ಚ ಮತ್ತು ಹಸಿರಿನ ಪರಿಸರದ ಲಕ್ಷಣವೇ ಅಂತಹದ್ದು.
ಪರಿಸರವನ್ನು ಮತ್ತಷ್ಟು ವೃದ್ದಿಸಲು ಹಾಗೂ ಹೊಸ ಬಗೆಯ ಹಸಿರ ವಾತಾವರಣವನ್ನು ಸೃಷ್ಠಿಸಲು ಈ ಜೂನ್ ತಿಂಗಳು ಬಹಳ ಸೂಕ್ತ ಸಮಯ. ಹಾಗಾಗಿಯೇ ಜೂನ್ 5 ನ್ನು ವಿಶ್ವ ಪರಿಸರದ ದಿನ ಎಂದು ಆಚರಿಸಲಾಗುತ್ತದೆ. ಅಂದು ಅನೇಕರು ಪರಿಸರದ ಕುರಿತು ಚರ್ಚೆˌ ಭಾಷಣ. ಕಥೆ ಕವನ ಹಾಡು ನಾಟಕ ಇತ್ಯಾದಿ ಇತ್ಯಾದಿ ಚಟುವಟಿಕೆಗಳಿಂದ ಆಚರಿಸಿದರೆ. ಮತ್ತೆ ಕೆಲವರು ಅಲ್ಲೊಂದು ಇಲ್ಲೊಂದು ಸಸಿ ನೆಟ್ಟು ಬಿಡುವರು. (ಮಾರನೆ ದಿನ ಅದರ ಗತಿ ದೇವರಿಗೇ ಪ್ರೀತಿ) ಇನ್ನೂ ಕೂಲವರು ಸದ್ದು ಗದ್ದಲವಿಲ್ಲದೆ ಸಸಿ ನೆಟ್ಟು ಪರಿಸರದ ಸಮೃದ್ದಿಗೆ ಮುಂದಾಗಿರುತ್ತಾರೆ. ಸರಕಾರವು ತನ್ನ ಆದ್ಯ ಕರ್ತವ್ಯದ ಮೂಲಕ ಈ ಬಗ್ಗೆ ಅರಿವು ಮೂಡಿಸಿರುತ್ತದೆ.
ಮತ್ತೆ ಕೆಲವರು ತಮ್ಮ ಸಾಮಾಜಿಕ ಕಳಕಳಿಯ ಪ್ರಜ್ಞೆಯಿಂದ ಸ್ವಯಂ ಪ್ರೇರಿತವಾಗಿ ನೂರಾರು ಗಿಡಗಳನ್ನು ನೆಟ್ಟು ಪೋಷಿಸುತ್ತಾರೆ. ಈ ನಿಟ್ಟಿನಲ್ಲಿ ಮೊನ್ನೆ 19/06/2021ರ ಶನಿವಾರದಂದು ಕರ್ನಾಟಕ ಅರಣ್ಯ ಇಲಾಖೆಯ ವತಿಯಿಂದ ನಮ್ಮ ಶಾಲೆಯ ಆವರಣದಲ್ಲಿ ( ಸರಕಾರಿ ಪ್ರೌಢಶಾಲೆ ಕುಂಚೂರು. ರಟ್ಟಿಹಳ್ಳಿ ತಾಲೂಕು ಹಾವೇರಿ) ಸುಮಾರು 70 ಕ್ಕೂ ಹೆಚ್ಚು ಸಸಿಗಳನ್ನು ನೆಟ್ಟು ಶಾಲೆಯ ಆವರಣಕ್ಕೆ ಅಂದವನ್ನು ತಂದುಕೊಟ್ಟಿದ್ದಾರೆ.
ಸರಕಾರˌ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ನಮ್ಮ ಶಾಲೆಯ ಮುಖ್ಯ ಗುರುಗಳಾದ ಶ್ರಿ ಸುರೇಶ್ ಅಂದಾನಪ್ಪ ಗುರುಗಳ ಪರಿಸರ ಕಾಳಜಿಯ ಕಾರ್ಯದಿಂದ ಈ ಮೊದಲೇ ಸುಮಾರು 200 ಕ್ಕೂ ಹೆಚ್ಚು ಗಿಡಗಳು ನಮ್ಮ ಶಾಲಾ ವಾತಾವರಣವನ್ನು ಹಸಿರಿನಿಂದ ಚಂದಗೊಳಿಸುವಂತೆ ಮಾಡಿದ್ದವು. ಆ ಸೊಬಗಿಗೆ ಮತ್ತಷ್ಟು ಮೆರಗು ಬರುವಂತೆ ಪುನಃ 70 ಕ್ಕೂ ಹೆಚ್ಚು ಸಸಿ ನೆಟ್ಟದ್ದು ನಮಗೆಲ್ಲ ಸಂತಸ ತಂದಿದೆ. ಶಾಲಾ ಸೌಂದರ್ಯವೇ ಮಕ್ಕಳನ್ನು ಮತ್ತು ಊರ ಜನರನ್ನು ಆಕರ್ಷಿಸುತ್ತದೆ. ಶಾಲೆಗೆ ಭೇಟಿ ನೀಡಿದ ಮೇಲಾಧಿಕಾರಿಗಳು ಹಾಗೂ ಸಾರ್ವಜನಿಕರು ಶಾಲೆ ಮತ್ತು ಶಾಲಾ ವಾತಾವರಣದ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿ ಅಭಿಮನಿಸುತ್ತಾರೆ. ಸ್ವಲ್ಪ ಸಮಯ ಕಳೆದು ಹೋಗುತ್ತಾರೆ.
ಬನ್ನಿ ನಾವು ನೀವುಗಳೆಲ್ಲ ಗಿಡ ಮರ ಬಳ್ಳಿಗಳಿಂದ ನಮ್ಮ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚವಾಗಿಡೋಣˌ ರಕ್ಷಿಸೋಣ. ರೋಗಮುಕ್ತ ವಾತಾವರಣವನ್ನು ಸೃಷ್ಠಿಸೋಣ .
*ಹಸಿರೇ ಉಸಿರು* ಎಂದು ಸಾರುತ್ತಾ ನಮ್ಮ ನಮ್ಮಉಸಿರನ್ನು ಉಳಿಸಿಕೊಳ್ಳೋಣ.
*ವೆಂಕಟೇಶ ಈಡಿಗರ*
ಸಾಹಿತಿ/ಶಿಕ್ಷಕರು/ರಂಗಕರ್ಮಿ
ರಾಣೆಬೆನ್ನೂರು
9008698311
LikeLike