ಅಂತರಂಗದ ಕತ್ತಲೆಗೆ ಬೆಳಕ ಶಬ್ದ ಬಿತ್ತುವ ದೇವಗುರು.ಘನ ಪ್ರೇಮದ ಮಾಯೆಗೆ ಮರೀಚಿಕೆ ನಿತ್ಯ ಪ್ರೀತಿ
ಮಧುರ ಪ್ರೇಮದ ಗರ್ಭದಲ್ಲಿ ಕಟು ವಿರಹದ ತಾಪ. ಪ್ರಕಾಶದ ಮಹಾ ಶರೀರ ಕಣ್ಣ ಬೆಳಕಿನ ಜ್ಯೋತಿರ್ಲಿಂಗ.
 ಅನಂತದಲ್ಲಿನ ಆತ್ಮ, ಬಯಲ ಬೆಸುಗೆಗೆ ಜೋಗುಳಲಾಲಿ.  ನಕ್ಷತ್ರದ ಮಿಂಚು ತಂಗಾಳಿ ಹಸುಗು ಸಂತೆ. ಚಂದ್ರಮುಖಿಯ ರೋಧನ, ಬೆಳದಿಂಗಳ ಕಳೆಗುಂದಿದ‌‌ ಕಾಂತಿ. ಕರಗುವ ಹಿಮ,‌ದರ್ಶನದ‌ ಮೇರು,ಮದ್ದಳೆಯ ನಾದವೇ ಗಟ್ಟಿಮೇಳ..

ತುಟಿಯ ಮೌನಕ್ಕೆ ಬಾಗಿದ ತಲೆ,   
ನನ್ನ  ಹೃದಯಕ್ಕೀಗ  ಸಾವಿರದ  ಮಾತು.
ಕಣ್ಣ ಕಾಡಿಗೆಯ ಕಾರ್ಮೋಡ,
ಸಿವುಡುಗಟ್ಟಿದ ಸಿಟ್ಟು.ಕಪ್ಪು ಕಳೆದುಕೊಂಡ ಮುಗಿಲು,ತಪಗುಟ್ಟಿ ಜಿನುಗುವ ಕಣ್ಣಾಲಿ.
ಮಾಯೆಯ ವಿರಹಕ್ಕೀಗ ಮತ್ತೆ
ಮರೆಯದ ಹರೆಯ….

ಬೆನ್ನಟ್ಟಿದ ಅದೇ ಕಂಗಳು,
ತುಟಿಯಂಚಿನ ಕೋಲ್ಮಿಂಚು                 
ಮುಂಗುರುಳ ದುಂಬಿ ‘ಮಾದಕ ನಗೆ’
ನೀ ಅರಸಿ ಬಂದ ಅನುರಾಗ.ಮಾತುಮೌನ ನಿಟ್ಟುಸಿರ ಕಥೆಯಾಗಿಸುವುದಾದರೆ,
ಭೋರ್ಗರೆದು ಸುರಿದುಬಿಡುವೆ
ಯಾವ ಒಡಂಬಡಿಕೆಗಳಿಲ್ಲ…        

ಸ್ವರ ಲಾವಣಿ ನೂರು ಪದ ಸರಣಿ, ಪೊಣಿಸಿದ ಮುತ್ತುಗಳೆಲ್ಲಾ ಎದೆಯ ಬಾರಕ್ಕೆ ಕಳೆಗುಂದದಿರಲಿ.. ಒಲವ ಸರಕು ಬಿಕರಿಯಾಗಲು  ಬದುಕು  ವ್ಯಾಪಾರವಲ್ಲ. ನಿನ್ನ ಜಂಗಮನಾದಕ್ಕೆ ತಾಳ ತಪ್ಪಿದಕಾಲ್ಗೆಜ್ಜೆ, ಮದ್ದಲೆಯ ಸುನಾದಕ್ಕೆ ಮಾತ್ರ ಸಾವಿಲ್ಲ…

ಕೈ ಬೆರಳುಗಳ ಬೆರಗು, ಮೋಹನ ಮುರಳಿ ಎದೆಯ  ಮೀಟಿದ  ತಂತಿ.    
ಭಾವ ಬಸಿರು ಬಗೆದು ಬಂದ ಒಲವಗಾನ ಘನ ಪ್ರೇಮದ ಸಂತಿ.
ನೀನೇ ಬರೆಯಬೇಕಿಗ, ಹೃದಯ ಶಾಹಿಯಿಂದ ಕಥೆಯೋ ಕವನವೋ.   
ದಿಕ್ಕು ತಪ್ಪಿದ ವರ್ಣಮಾಲೆ    
ಖಾಲಿಯಾದ ಪದ ಬಂಢಾರ….   

ಅಂಗಾಂಗಗಳ ವರ್ಣರಂಜಿತ ಹೊಗಳಿಕೆ ಬೇಕಿಲ್ಲ. ಯಾವ  ಪ್ರಮೇಯಗಳಿಗೂ ಹೋಲಿಸಬೇಡ ಅರಸಿಬಂದ ಅರಸನ ಕನಸಕಂಗಳ ಚೆಲುವೆ ನೀ ಕಟ್ಟುವ ಪದಬಂಧ ಶಬ್ದಮಾಲೆಗೆ
ಕೇವಲ ಪ್ರತಿಮೆ ಮಾತ್ರ….
                             

ಸೋಬಾನೆಗೆ ಸೋನೆ ಮಳೆಯ ಉಯ್ಯಾಲೆ. ಅಮಾವಾಸ್ಯೆಯ ಚಂದ್ರನೀಗ ಹುಣ್ಣಿಮೆಯ ಮದುವಣಿಗ. ನಾ ಬೆಳದಿಂಗಳ ಬಾಲೆ, ನಿತ್ಯವೂ ಮಲ್ಲಿಗೆಯ ದಂಡೆಯ ಮುಡಿಗೇರಿಸಿಕೊಂಡ ಮದುವಣಗಿತ್ತಿ.
ಸುರಿವ ಮಳೆ  ಕೊರೆವ ಚಳಿ ತುಟಿಯ ನಗು ನಿನ್ನ ಅಲ್ಲಮನಾಗಲೂ ಬಿಡೆನೂ ನಾ…

                         🔆🔆🔆

✍️ ಡಾ.ಮೈತ್ರೇಯಿಣಿ ಗದಿಗೆಪ್ಪಗೌಡರ ಸಹಾಯಕ ಪ್ರಾಧ್ಯಾಪಕರು  
        ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆ,ಸಹಾಯಕ                 ನಿರ್ದೇಶಕರು,ಪ್ರಸಾರಾಂಗ.
       ರಾಣಿಚೆನ್ನಮ್ಮ ವಿಶ್ವವಿದ್ಯಾಯ       ಬೆಳಗಾವಿ-591156