ವಚನಗಳಂತಿರುವ ಅಬಾಬಿಗಳ ತಿರುಳು ಸಮಾಜಮುಖಿ ಚಿಂತನೆಗಳು. ಹೊತ್ತಿ ಉರಿ ಯುತ್ತಿರುವ ದ್ವೇಷದ ಧರ್ಮದ ಜ್ವಾಲೆಗಳಿಗೆ ಸಾಂತ್ವನಿಸುವ ಶಕ್ತಿ ಇರುವುದು ಪ್ರಖರ ನುಡಿಗಳಿಗೆ ಮಾತ್ರವೇ. ಹೀಗಾಗಿ ಆಯಾ ಕಾಲ, ಸಂದರ್ಭ ಮತ್ತು ಪರಿಸರಗಳಿಗೆ ಅನುಗುಣವಾಗಿ ಧರ್ಮ ಗ್ಲಾನಿಯಾದಾಗ ಸಮಾಜ ಮತ್ತು ಮನುಷ್ಯನನ್ನು ಸರಿದಾರಿಗೆ ತರುವ ಮಹತ್ಕಾರ್ಯ ಮಾಡಿದ ಮಹಾ ಸಂತರ ಅಮೃತವಾಣಿಗಳೇ ಇಂದಿಗೂ ಜಗತ್ತನ್ನು ಆಳುತ್ತಿವೆ. ವ್ಯಕ್ತಿಯೊಬ್ಬನ ಆಂತ ರಂಗಿಕ ಜಿಜ್ಞಾಸೆ ಸಾಮುದಾಯಿಕ ಶಾಂತಿ ಬಯಸುವುದೇ ಆದರೆ ಅದೊಂದು ಸಮಷ್ಟಿ ಪ್ರಜ್ಞೆಯ ಪ್ರತೀಕ. ಈ ನಿಟ್ಟಿನಲ್ಲಿ ತೆಲುಗಿನ ಕವಿ ಷೇಕ್ ಕರೀಮುಲ್ಲಾ ಅವರು ರಚಿಸಿ ರುವ ವಿಶಿಷ್ಟವಾದ ಪಂಚಪದಿಗಳಾದ ಅಬಾಬಿಗಳನ್ನು ಕನ್ನಡಕ್ಕೆ ಅನುವಾದಿಸುವ ಮೂಲಕ ಧನಪಾಲ ನಾಗರಾಜಪ್ಪನವರು ಸತ್ವಯುತ, ವೈಚಾರಿಕ ಚಿಂತನೆಗಳಿಗೆ ನೆಲೆ ನೀಡಿದ್ದಾರೆ.

ಬದರ್ ಎನ್ನುವುದು ಒಂದು ಯುದ್ಧ ಭೂಮಿ. ಅಬಾಬಿಗಳು ಎಂದರೆ ಧರ್ಮದ ಜಯಕ್ಕಾಗಿ ಹೋರಾಡಿದ ಪಕ್ಷಿಗಳ ಸಮೂಹ. ಅಧರ್ಮ, ಅನ್ಯಾಯ, ಅನೀತಿಗಳೊಂದಿಗೆ ಮುಖಾಮುಖಿ ಆಗಲೇಬೇಕಾದ ಸಂದಿಗ್ಧತೆಯಲ್ಲಿ ದುರುಳರೊಂದಿಗೆ ಹೋರಾಡಲು ಬೇಕಾಗಿ ರುವುದು ದೈವ ಪ್ರೇರಕ ಶಕ್ತಿ. ಹೀಗಾಗಿ ಅಬಾಬಿಗಳು ಎಲ್ಲಾ ಕಾಲಕ್ಕೂ ಪ್ರಸ್ತುತವಾ ಗುತ್ತವೆ. ಅಂದು ದೈವದ ಪಕ್ಷಿಗಳು ಧರ್ಮ ಉಳಿಸಿದರೆ ಇಂದು ದೈವದ ನುಡಿಗಳು ಧರ್ಮ ರಕ್ಷಿಸುತ್ತಿವೆ ಎಂಬುವುದಕ್ಕೆ ಈ ಅಬಾಬಿಗಳೇ ಸಾಕ್ಷಿ. ಸಾತ್ವಿಕ ತಳಹದಿಯ ಸಾತ್ವಿಕ ಸಮಾಜ ನಿಮಾರ್ಣದ ಮಹತ್ತರ ವಾದ ಆಲೋಚನೆಗಳನ್ನು ಒಳಗೊಂಡ ಒಟ್ಟು ನೂರು ಅಬಾಬಿಗಳು ಇಲ್ಲಿ ಮಹಾ ಮಾನವತಾವಾದದ ಸಿದ್ಧಾಂತಗಳಂತೆ ನಿರೂಪಿಸಲ್ಪಟ್ಟಿವೆ.

ಆತ್ಮಾನುಸಂಧಾನದ ಮೂಲಕ ಸಮಾಜ ವನ್ನು ತಿದ್ದುವ ಹಂಬಲ ಹೊತ್ತುನಿಂತ ಈ ಪ್ರಸ್ತುತ ಅಬಾಬಿಗಳು ವಿಶ್ವ ಮಾನವತೆಗೆ ಕರೆ ನೀಡುವ ಶಕ್ತಿಯುತ ವಾಣಿಗಳಾಗಿವೆ. ಸಜ್ಜನ, ಸಚ್ಚಾರಿತ್ರ್ಯವಂತ ವ್ಯಕ್ತಿಯೊಬ್ಬನನ್ನು ಆವರಿಸಿಕೊಳ್ಳಬಹುದಾದ ಮನಃಶ್ಶಾಂತಿ ಯತ್ತ ಕೊಂಡೊಯ್ಯಬಹುದಾದ ತಾಕತ್ತು ಈ ಅಬಾಬಿಗಳಲ್ಲಿದೆ. ಜಾಗತಿಕ ಸಂತರ ಮಹೋನ್ನತವಾದ ತತ್ವಾದರ್ಶಗಳನ್ನು ಪ್ರತಿನಿಧಿಸುವ ಅಬಾಬಿಗಳಲ್ಲಿನ ಅಭಿವ್ಯಕ್ತಿ ಗಳು ನಿಜಕ್ಕೂ ಮಾನವೀಯತೆಯ ಉಕ್ತಿ ಗಳಾಗಿವೆ. ಇಂತಹ ಬಹು ಮಹತ್ವವಾದ ಅಬಾಬಿಗಳನ್ನು ತೆಲುಗಿನಿಂದ ಅತ್ಯಂತ ಸಮರ್ಥವಾಗಿ  ಅನುವಾದಿಸಿ   ಕನ್ನಡಕ್ಕೆ ವಿಶಿಷ್ಟವಾದ   ಕೊಡುಗೆ   ನೀಡುತ್ತಿರುವ ಧನಪಾಲರವರ ಕಾರ್ಯ ನಿಜಕ್ಕೂ ಶ್ಲಾಘ ನೀಯ.  ಒಬ್ಬ  ಕವಿಯ   ಅಂತರಾಳದ ಜಿಜ್ಞಾಸೆಗಳು ಕೇವಲ ಆಯಾ ಭಾಷಿಕ ನೆಲೆ ಗಳಲ್ಲಿ ಮಾತ್ರ ಉಳಿದುಕೊಳ್ಳುವುದರಿಂದ ಸಾರ್ವತ್ರಿಕ ಸಿದ್ಧಾಂತಗಳು ಆಸಕ್ತ ರನ್ನು ತಲುಪವಲ್ಲಿ ಸೋಲುತ್ತವೆ. ಇಂತಹ ಕೊರತೆ ಯನ್ನು ತುಂಬಬಲ್ಲಂತಹ ಶಕ್ತಿ ಇರುವುದು ಅನುವಾದಕ್ಕೆ ಮಾತ್ರವೇ ಎಂಬುವುದನ್ನು ಅರಿತಿರುವ ಧನಪಾಲರವರ ನಿರಂತರವಾದ ಪ್ರಯತ್ನ ಸಾಹಸವೇ ಸರಿ.

ಬದರ್ ಕೃತಿಯ ಮೂಲ ಆಶಯವೇ ಮಹಾಮಾನವತೆ. ಪ್ರಸ್ತುತ ಕೃತಿಯ ಒಳಗೆ ಅಡಗಿದ ಧರ್ಮಸಾರವನ್ನು ಮತೀಯ ನೆಲೆಗಟ್ಟಿನಲ್ಲಿ ಅರ್ಥೈಸಿಕೊಳ್ಳುವುದಕ್ಕಿಂತ ವಿಶ್ವಮಾನವತೆ ಮತ್ತು ಸೌಹಾರ್ದತೆಯ ಚಿಂತನೆಗಳಾಗಿ ಸ್ವೀಕರಿಸಬೇಕಿದೆ. ಬದರ್ ಕೃತಿಯ ಮೂಲಕ ಅಬಾಬಿಗಳು ನಮ್ಮ ಮನದಾಳದ ಮತೀಯ ಮೌಢ್ಯ, ವರ್ಗ ಸಂಘರ್ಷಗಳ ಬೇರುಗಳನ್ನು ಕಿತ್ತು ಹಾಕಿ ಮಾನವೀಯತೆಯ ತಳಪಾಯದಲ್ಲಿನಿಲ್ಲುವ ಮನೋಜ್ಞ ನುಡಿಗಳಾಗಿವೆ. ಸೃಜನಶೀಲ ಸಾಹಿತ್ಯದ ಭಾಗವಾಗಿ ಪರಿಗಣಿಸಲ್ಪಡುವ ಅಬಾಬಿಗಳು ಅಂತಃಕರಣ, ಶಾಂತಿ ಮತ್ತು ಸೌಹಾರ್ದತೆಯ ಮೈಲಿಗಲ್ಲುಗಳಾಗಿವೆ. ಆತ್ಮ ನೀರಿಕ್ಷಣೆ ಮಾದರಿಯ ಆತ್ಮಾವಲೋ ಕನ ಮತ್ತು ಆತ್ಮಾನುಸಂಧಾನದ ಮಾದರಿ ಗಳಾದ ಅಬಾಬಿಗಳು ಹೊಸ ಚೈತನ್ಯಶೀಲ ಬದುಕಿಗೆ ದಾರಿದೀಪಗಳಾಗಿವೆ. ಆತ್ಮೋನ್ನ ತಿಗೆ ಮತ್ತು ಆತ್ಮಗೌರವದ ಉತ್ಕರ್ಷಕ್ಕೆ ಹುರಿಗೊಳಿಸುವ ಮಾನವೀಯ ಜಿಜ್ಞಾಸೆ ಗಳಿಂದ ಆವೃತ್ತವಾದ ಅಬಾಬಿಗಳು ಸಾರ್ವ ಕಾಲಿಕ ಮೌಲ್ಯಗಳನ್ನು ಗರ್ಭಿಕರಿಸಿಕೊಂಡಿ ವೆ.  ನೆಲದ ಗುಣ, ಮಾನವ ಜೀವನದ ಪರಮೋನ್ನತಿ ಅಂತೆಯೇ ವಿಭಿನ್ನ ಕಾವ್ಯ ಶೈಲಿಯಲ್ಲಿ ಹೊರಹೊಮ್ಮಿದ ಪ್ರಸ್ತುತ ಅಬಾಬಿಗಳು ಧರ್ಮ ರಾಜಕಾರಣದಿಂದ ಹೊರಬರುವ ಮೂಲಕ ವಿಶ್ವಮಾನವ ಸಂದೇಶಗಳನ್ನು ಹೊತ್ತುನಿಂತಿವೆ.ವಿಶ್ವಪಥದ ಸಾರ್ವಕಾಲಿಕ ಮೌಲ್ಯವೇ ಮಾನವೀಯತೆ. ಹೀಗಾಗಿ ಮನೋಗ್ಲಾನಿಯಿಂದ ಹೊರ ಬರಲು ಕರೆ ನೀಡುವ ಅಬಾಬಿಗಳಿಗೆ ತನಿ ಬೆಲೆಯಿದೆ.

ಜಿಹಾದ್ ಅಂದರೆ
ಜಿಂದಗಿಯನ್ನು ಚಿವುಟುವುದೆಂದು ಯಾರು ಹೇಳಿದ್ದು?
ಸಸಿಗೆ ನೀರು ಉಣಿಸುವುದು ಕೂಡಾ ಜಿಹಾದೇ
ಕರೀಮ್!
ಉಗ್ರವಾದದ ಮತಿ ಕೆಟ್ಟಿದೆ ನೋಡು.

(17ನೇ ಅಬಾಬಿ) ಮತೀಯವಾದಗಳು ಕೆಂಡದಲ್ಲಿ ಕೊದಲು ತೊಳೆದುಕೊಂಡಂತೆ. ಧರ್ಮಯುದ್ಧ ಎನ್ನುವುದುಅಮಾನವೀಯ ನೆಲೆಯ ರಕ್ತಪಾತ. ಇದು ಕೇವಲ ಮನೆಯ ನ್ನು ಸುಡುವ ಕಿಚ್ಚು. ಬದುಕನ್ನು ಕಸಿದುಕೊ ಳ್ಳುವ ಹಕ್ಕು ಯಾರಿಗೂ ಇಲ್ಲ. ಅಂತೆಯೇ ನೆಟ್ಟ ಸಸಿಗೆ ನೀರೆರೆದು ಹಸಿರು ಹೊನ್ನನ್ನು ಜೀವಂತಗೊಳಿಸುವುದು ಪ್ರಕೃತಿ ಪ್ರೇಮದ ಧರ್ಮ ಯುದ್ಧವಾಗಿದೆ.                

ಕನಸುಗಳೆಲ್ಲಾ ಹಳೆಯವೇ              ಹುಟ್ಟೇಹೊಸದು ಬೇಕು  ಹೇತುವನ್ನೆಂದೂಹೀನಗೊಳಿಸಬೇಡ            ಕರೀಮ್ !                              
ಸೃಜನ ಶಾಯಿ ಅಂತಹದ್ದು.

(19ನೇ ಅಬಾಬಿ) ಕವಿಯ ಆರ್ತಧ್ವನಿ ಇಲ್ಲಿ ಹೃದಯ ವಿದ್ರಾವಕತೆಯಿಂದ ಮರುಗಿದೆ. ಕವಿಯ ಅಭಿವ್ಯಕ್ತಿಯಜೀವಂತಿಕೆ ಇರುವುದೆ ಸೃಜನಶೀಲತೆಯಲ್ಲಿ.ಇದುವೇ ಜೀವನ್ಮುಖಿ ತತ್ವವು ಕೂಡಾ ಆಗಿದೆ. ಕವಿಯ ಕಾವ್ಯ ಪ್ರವಾಹದಿಂದ ಅಧರ್ಮದ ಕೊಳೆಗಳು ಕೊಚ್ಚಿಹೋಗಬೇಕು. ಲೋಕದ ಮೂಲ ಆಶಯವು   ವಿಶ್ವಪ್ರೇಮದ  ಮೂಲಕ ಭ್ರಾತೃತ್ವವನ್ನು  ಹುರಿಗೊಳಿಸುವುದು. ಹೀಗಾಗಿ ಈಗ ಹೊಸ ರೀತಿಯ ಚಿಂತನೆ ಗಳಿಗೆ ಆದ್ಯತೆ ನೀಡಬೇಕಾಗಿದೆ.

ಅರ್ಧರಾತ್ರಿಯಲ್ಲಿ ಒಂಟಿಯಾಗಿ
ಫುಟ್ಪಾತ್ ನಲ್ಲಿ ಫಕೀರನೊಬ್ಬ ತಿರುಗಾಡುತ್ತಿದ್ದಾನೆ
ಅವನೇನು ಕಳೆದುಕೊಂಡಿದ್ದಾನೋ                           ತಿಳಿಯದೆ                      ಕರೀಮ್ !
ಅದು ನಿನ್ನ ನೆರಳೇನಾ?

(26ನೇ ಅಬಾಬಿ) ಬಂಜರು ಭೂಮಿಯಲ್ಲಿ ಬೆಳೆ ಅಸಾಧ್ಯ. ಬುದ್ಧ, ಬಸವ, ಗಾಂಧಿ, ಪೈಗಂಬರ್, ಅಂಬೇಡ್ಕರ್, ಲೋಹಿಯಾ, ಜ್ಯೋತಿಬಾ ಫುಲೆ, ಸ್ವಾಮಿ ವಿವೇಕಾನಂದರು ಮಾನವ ಚರಿತ್ರೆಯುದ್ದಕ್ಕೂ ಮಾನವೀಯ ತೆಗೆ ಕರುಳ ಸ್ಪರ್ಶ ನೀಡಿದ್ದಾರೆ. ಸಮಾಜಕ್ಕೆ ಅಂಟಿದ ರೋಗಗಳನ್ನು ತಮ್ಮ ಪ್ರಖರ ವಾಣಿಗಳಿಂದ ಗುಣಮುಖವಾಗಿಸಿದ್ದಾರೆ. ಜಗತ್ತನ್ನು ಬದಲಿಸಬಲ್ಲ ಶಕ್ತಿ ಆಧ್ಯಾತ್ಮಿಕ ಚಿಂತನಗಳಲ್ಲಿದೆ. ಲೋಕದ ಪರಿಭ್ರಮಣೆ ಯ ನಿತ್ಯತಸ್ಯವೇ ಪರಿವರ್ತನೆ. ಹೀಗಾಗಿ ದಾರ್ಶನಿಕರ ಪ್ರತಿಬಿಂಬಗಳು ಕಾಲಕಾಲಕ್ಕೆ ಕೊಳೆ ತೊಳೆಯಲಿವೆ.

ಭಯೋತ್ಪಾದನೆ ಒಂದು ಭೂತ
ಖಂಡ ಖಂಡಾಂತರಗಳ ಪ್ರಶ್ನೆ
            ಶವಗಳು ಬದುಕುತ್ತಿವೆ!             ಕರೀಮ್!
ಯಾಕೋ ಮನುಷ್ಯರೇ ಮರಣಿಸುತ್ತಿದ್ದಾರೆ!

(30ನೇ ಅಬಾಬಿ) ಅರೆ ಪ್ರಜ್ಞೆಯ ಮನಃ ಸ್ಥಿತಿಯ ಅರೆಬುದ್ಧಿಯ ಮನೋಮಾಲಿನ್ಯ, ಮನೋವೈಕಲ್ಯದ ಮೈಲಿಗೆ ಹೊಂದಿದ ಜಾಲೆಜ್ವಾಲೆಗೆ ಸಿಲುಕಿದಯಾರೂ ಬದುಕಿಲ್ಲ. ಸಾಮಾಜಿಕ ಜೀವನದಲ್ಲಿ ಜಾತಿ, ಮತದ ಜಿಜ್ಞಾಸೆಗಳು ಅಡ್ಡಗೋಡೆಯ ಮೇಲಿನ ದೀಪಗಳಾಗಬಾರದು.

ಬದರ್ನ ಸುತ್ತಲೂ
ಭಾರವಾಗಿ ಕಾಲ ಸುತ್ತುತಿಹುದು
ವಿಶ್ವಾಸ ವಿಲಯವನ್ನು ಎದುರಿಸಬಲ್ಲದು
ಕರೀಮ್!
ಮುಂದಿದೆ ಹುಣ್ಣಿಮೆಯ ಬೆಳದಿಂಗಳು.

(33ನೇ ಅಬಾಬಿ) ಆಕಾಶದ ಎದೆಯ ತುಂಬೆಲ್ಲಾ ಹೆಪ್ಪುಗಟ್ಟಿ ಉಪ್ಪುಗಟ್ಟಿದ ಮೋಡಗಳು ಆವರಿಸಿವೆ. ಮನುಷ್ಯ-ಮುಷ್ಯರ ನಡುವಿನ ಸ್ನೇಹ ಗಟ್ಟಿಗೊಳ್ಳಬೇಕು. ಬೆಳಕು ಅನೂಚಾನವಾಗಿ ಹರಡಬೇಕು. ಯುದ್ಧ ಮತ್ತು ಶಾಂತಿ ಇವೆರಡೂ ಲೋಕದ ಸತ್ಯಗಳು. ಯುದ್ಧದ ನಂತರ ಸೋಲು-ಗೆಲುವು ಮುಖ್ಯವಲ್ಲ; ಪರಿವರ್ತನೆ ಬಹುಮುಖ್ಯ. ರಾಜ ಅಶೋಕ ನಂತೆ, ದೊರೆ ಅಲೆಕ್ಸಾಂಡರ್ನಂತೆ ಸತ್ಯದ ನೆಲೆಗಳು ಲೋಕವನ್ನು ಆವರಿಸಿಕೊಳ್ಳ ಬೇಕು. ತನ್ಮೂಲಕ ಜ್ಞಾನದ ಬೆಳಕು ಚಂದಿರ ನ ಬೆಳದಿಂಗಳಂತೆ ತಂಪಾದ ಕಿರಣ ಸೂಸಿ ಮಹಾಮಾನವತೆಯ ದೀಪ ಬೆಳಗಬೇಕು.

                

ನನ್ನ ಮಸೀದಿಯಲ್ಲಿ
ನಿನ್ನ ದೇವರು ಹುಟ್ಟಿದ್ದಾನೆ ಎಂದೆ
ಮಸೀದಿ ಏನು ಕರ್ಮ ಮನಸ್ಸನ್ನೇ      ಬರೆದುಕೋ   
    ಕರೀಮ್!
ಭೂಗೋಳವೆಲ್ಲಾ ನಿನ್ನ ಮಸೀದಿಯೇ ಅಂತ ಹೇಳು.

(35ನೇ ಅಬಾಬಿ) ಮೆದುಳಿಗೆ ಅಂಟಿದ ಮುಳ್ಳುಗಳು ಯಾವಾಗಲೂ ವಿಷಬೀಜ ಗಳನ್ನು ಬಿತ್ತುತ್ತಲೇ ಇರುತ್ತವೆ. ಧರ್ಮ, ದೇವರುಗಳ   ಹೆಸರಿನಲ್ಲಿ  ನಡೆಯುವ ಕುಕೃತ್ಯಗಳಿಗೆ ಈ ನೆಲ ನಡುಗಿದೆ.ಬಯಲು, ಬಾಂದಳಗಳೆಲ್ಲಾ ದೇವನ ಮನೆ. ರಾಮ ರಹೀಮರೀರ್ವರು ಈ ಜಗದ ರಕ್ಷಕರು. ಜೀವಕೋಟೆಯ ಆರಾಧನೆಗೆ ಸಚ್ಚಿಂತನೆಯ ಭಾವ ಮುಖ್ಯವೇ ಹೊರೆತು ಸಂಘರ್ಷವಲ್ಲ.

ವೀರನೆಂದರೆ ಯಾರು?
ನಾಳೆಗಾಗಿ ಇಂದನ್ನು ತ್ಯಜಿಸಿದವನು
ತರುವಿನಂತಾಗಿತಪಸ್ವಿಯಂತೆ ನಿಂತವನು   ಕರೀಮ್ !
ಆಕಾಶದ ಮುಡಿಯಲ್ಲಿ ಹೊಸ ತಾರೆಯ ನೋಡು.

(45ನೇ ಅಬಾಬಿ) ಸತ್ಯ ಸಮತೆಯ ಪಥಕೆ ಯಾವ ದೇವನು ಇಹನು? ಸತ್ಯ ಸಮತೆಯ ದಾಟಿ ಧರ್ಮವಿಹುದೆ? ಪ್ರೀತಿ ವಿಶ್ವಾಸಗಳ ಮೀಟಿ ಕರೆಯುವ ಹೃದಯ ದೇವಮಂದಿರ ಕ್ಕಿಂತ ಕಡಿಮೆಯಾಗುವುದೆ? ತ್ಯಾಗದಲ್ಲಿ ಅಮೃತವಿದೆ. ನಿರ್ಮಲ ಚಿತ್ತದ ಬೇಡಿಕೆಗೆ ಎಂದೂ ಕೆಡುಕಿಲ್ಲ. ಧನ್ಯತೆಯೇ ವೀರತ್ವ.

ಆಗ್ರಹಕ್ಕೂ ಮಿಗಿಲಾದ
ವಿಗ್ರಹ ಇದೆಯೆ?
ನಿಗ್ರಹಕ್ಕೂಮೇಲಾದ ಸನ್ಮಾರ್ಗಇದೆಯೆ?
   ಕರೀಮ್ !
ಪ್ರವಾದಿಯವಚನ ನಿನಗೇನು ಕಲಿಸಿತು?

(51ನೇ ಅಬಾಬಿ) ಮನುಷ್ಯತ್ವದ ಶುದ್ಧೀಕ ರಣ ಬಹುಮುಖ್ಯ. ಆತ್ಮವಿಶ್ವಾಸ ತೀರಾ ಹದಗೆಟ್ಟರೆ ಮನುಕುಲ ಖಂಡಿತವಾಗಿಯೂ ನಾಶವಾಗುವುದರಲ್ಲಿ ಸಂದೇಹವೇ ಇಲ್ಲ. ಪರಸ್ಪರ ತಿಳುವಳಿಕೆಯ ಮಾನವೀಯ ಅಂತಃಕರಣದ ಪ್ರಾಯೋಗಿಕ ಬದುಕನ್ನೇ ಅಲ್ಲವೆ ಪ್ರವಾದಿಗಳು ಬೇಧಿಸಿದ್ದು, ಅವರ ಅರಿವಿನ ದೀವಿಗೆ ಸದಾ ಬೆಳಗಲಿ. ಗರ್ವ, ಅಹಂಕಾರದಿಂದ ವ್ಯಕ್ತಿ ಮತ್ತು ವ್ಯಕ್ತಿತ್ವದ ನಾಶ ಖಂಡಿತ.

ಮತದ ಬಗ್ಗೆ ಹೇಳಬೇಡ
ಮಾನವನ ವಿಳಾಸವಲ್ಲಿ ಸಿಗುವುದಿಲ್ಲ
ವಿಶ್ವಾಸಿ ವಿಶ್ವಪ್ರೇಮಿ
ಕರೀಮ್!
ಬೀಸುವ ಗಾಳಿಗೆ ಬಂಧವಿದೆಯೆ?

(71ನೇ ಅಬಾಬಿ) ಈ ಸಾಮಾಜಿಕ ವ್ಯವಸ್ಥೆ ದೇಶ, ಭಾಷೆ, ಪ್ರಕೃತಿ ಇವೆಲ್ಲಾ ಹಲವಾರು ಅರಿವಿನೊಳಗೆ ಇಳಿದು ದಕ್ಕಿದ ಭಾವನೆಗಳು ಜಾತಿಯ ಜೀವತಂತುಗಳುಮಾನವೀಯತೆಗೆ ಮಿಡಿಯುವ ರಾಗಗಳಾಗಬೇಕು. ಮತೀಯ ಹುಚ್ಚು ನಾವೇ ಬಿತ್ತಿಕೊಂಡ ಮೆತ್ತನೆಯ ಮುಳ್ಳುಗಳು. ವಿಶ್ವಪ್ರೇಮ ಇಂದಿನ ಆದ್ಯತೆ.

ಜಹೆಜ್ (ವರದಕ್ಷಿಣೆ)ಗಾಗಿ,
ಜನ್ನತ್ (ಸ್ವರ್ಗ) ಅನ್ನು ಕಳೆದುಕೊಂಡನೊಬ್ಬ
ಮಂಡಿಯೂರಿ ಎಷ್ಟು ಪ್ರಾರ್ಥಿಸಿದರೇನು!
ಕರೀಮ್!
ಕೂಳಿನಲ್ಲೇ ಕಾಲವನ್ನು ಹುಡುಕುತ್ತಿರು ವಂತಿದೆಯಲ್ಲಾ!

(74ನೇ ಅಬಾಬಿ) ನೈಜ ಬದುಕಿನ ಹುಡು ಕಾಟ ಈ ಅಬಾಬಿಯಲ್ಲಿದೆ. ಪ್ರಪಂಚದ ನೋವನ್ನು ತನಗಾದ ನೋವಿನಂತೆ ಕವಿ ಹೃದಯವಿಲ್ಲಿ ಮರುಗಿದೆ. ಸಿಹಿ ಚಿಗುರಿನ ಬದುಕು, ಬದುಕಿನ ಉಪಕ್ರಮವೆಂದರೆ ಸರಳತೆ.ಮನರಂಜನೆ ಮತ್ತು ಆಸ್ತಿ,ಅಂತಸ್ತು ಗಳ ಗಳಿಕೆಯಲ್ಲಿ ಅಮೂಲ್ಯವಾದ ಜೀವನ ವನ್ನು ಹಾಳುಮಾಡಿಕೊಳ್ಳುವ ಮೂಲಕ ವ್ಯರ್ಥ ಕಾಲಹರಣ ಮಾಡುವ ಮೃಗೀಯತೆ ಯನ್ನು ಈ ಅಬಾಬಿಯಲ್ಲಿ ಖಂಡಿಸಲಾಗಿದೆ.

ಆಕೆಗೆ
ಮೊಳಕೆ ನಾಟುವುದಷ್ಟೇ ಗೊತ್ತು
ಫಸಲು ಕೊಡುವ ಹೊಲದಂತೆ
ಕರೀಮ್!
ಮಡದಿಗೂ ಮಿಗಿಲಾದ ಮಮತೆಯಿಲ್ಲ.

(85ನೇ ಅಬಾಬಿ) ಈ ಲೋಕದ ನಿಸ್ವಾರ್ಥ ತೆಗೆ ಪಠ್ಯವಾಗಿರುವವಳೇ ಹೆಣ್ಣು. ಭೂಮಿಗೆ ಬಿದ್ದ ಫಲ ಕೊಡಲೇಬೇಕು. ಅಂತೆಯೇ ಈ ಲೋಕದ ಉತ್ಪಾದಕತೆಯ ಶಕ್ತಿ ಇರುವುದು ಹೆಣ್ಣಿನಲ್ಲಿ ಮಾತ್ರ. ಆದ್ದರಿಂದ ಮಡದಿಯ ನ್ನು, ತಾಯಿಯನ್ನು, ಹೆಣ್ಣನ್ನು ಗೌರವಿಸು ವುದು ನಮ್ಮ ಸಂಸ್ಕೃತಿಯಾಗಿದೆ.

ವಿನೂತನ ಪ್ರಯೋಗದ ಪಂಚಪದಿಗಳ ಅಬಾಬಿಗಳು ಈ ಜಗದ ಮಹಾಮಾನವತೆಗೆ ಹಿಡಿದ ಕನ್ನಡಿಗಳಾಗಿವೆ. ಓದುತ್ತ ಹೋದಂತೆ ಸಿರಿವಂತ ಪ್ರತಿಮಾ ಪದಗಳು ಎಲ್ಲರ ಎದೆಯಲ್ಲಿ ಹೆಪ್ಪು ಗಟ್ಟುತ್ತಿರುವ ಕತ್ತಲನ್ನು ಬೇಧಿಸಿದಂತೆ ಭಾಸವಾಗುತ್ತದೆ. ಅಕ್ಷರ ಗರ್ಭ ಸೀಳಿದ ಭಾವ ಬಸರಿನ ಹೆರಿಗೆಗೆ ಪದಲಾಲಿತ್ಯ, ಶಬ್ದ ಪ್ರಮಾಣಗಳ ಮೂಲಕ ಶಬ್ದಸೂತಕದ ಹಂಗು ತೊರೆದು ಅನುಭೂತಿ ಯ ಕುಲುಮೆಯಲ್ಲಿ ಸಾಣೆಹಿಡಿದಂತಿವೆ. “ವಿಶ್ವಾಸ ಅಂದರೆ ಬಿಚ್ಚುಗತ್ತಿಯಲ್ಲ”, “ಈ ಮಣ್ಣಿನ ಋಣ ಮರೆಯದಿರು”, ಸೋಲು-ಗೆಲುವುಗಳ ನಡುವೆ ಸಣ್ಣ ರಹದಾರಿಯಿದೆ ನೋಡು”,       “ವಿಶ್ವಾಸ ವೀರತ್ವಕ್ಕಿಂತಲೂ ದೊಡ್ಡದು”, “ಸೂರ್ಯ ತಲೆ ತಗ್ಗಿಸುವುದಿಲ್ಲ”, ಬೇಷರಂ ಆಗಿ ಬದುಕಬೇಡ”,    “ಕಸ್ತೂರಿ ಕತ್ತಲಲ್ಲಿ ಇದ್ದರೇನು?, “ಅಂಗಳದಲ್ಲಿ ಮುಳ್ಳುಗಳಿವೆ ನೋಡಿ ಅಡಿಯಿಡು”, “ಸಹನೆಯಲ್ಲಿಸ್ವರ್ಗವಿದೆ” ಎಂಬ ಹದವರಿತ ಪದಪುಂಜಗಳು ನಮ್ಮ ಎದೆಯಲ್ಲಿ ಗೆಜ್ಜೆಕಟ್ಟಿ ತಾಳ ಹಾಕುತ್ತವೆ. ಪ್ರತಿಮಾಲೋಕದ ಮಹಾಪರ್ವವೇ ಇಲ್ಲಿ ಮನೋಜ್ಞ. ಓದಿದಷ್ಟು ಹಸಿವನ್ನು, ನುಂಗಿದಷ್ಟು ನಂಜನ್ನು, ಮರೆಯದಷ್ಟು ಭಾವೋದ್ವೇಗ, ಹಾಡಿದಷ್ಟು ಮೀಟುವ ಶಬ್ದ ಸಾಮರ್ಥ್ಯ ಹೊಂದಿರುವುದು ಆಪ್ಯಾಯ ಮಾನವಾಗಿದೆ. ನಮ್ಮನ್ನು ಆವರಿಸಿಕೊಂಡು ಚಿತ್ತಬಿತ್ತಿಯಲ್ಲಿ ರಂಗವಲ್ಲಿ ಬಿಡಿಸಿದ ಬದರ್ ಕೃತಿಯ ಅಬಾಬಿಗಳು ನಮ್ಮ ಎದೆಯನ್ನು ಸೀಳಿ ಮಹಾಸ್ಫೋಟಗೊಳಿಸಿ ಕತ್ತಲಾವರಿಸಿ ಘನೀಕರಿಸಿ ನಿಂತ ಕಾರ್ಮೋಡಗಳಿಂದ ಬೇರ್ಪಟ್ಟು ವಿಷಮ ಘಳಿಗೆ ವಿಷದ ಗಾಳಿ ಯಿಂದ ದೂರಾಗಿ ವಿಶ್ವಮಾನವತೆಗೆ ಬೆಳಕಿನ ಕನ್ನಡಿಗಳಾಗಿ ಹೊರಹೊಮ್ಮಲಿ ಎಂದು ಆಶಿಸುವೆ. ಷೇಕ್ ಕರೀಮುಲ್ಲಾರವರ ಅಬಾಬಿಗಳನ್ನು ಕನ್ನಡಕ್ಕೆ ಅನುವಾದಿಸುವ ಮೂಲಕ ಓದುಗರಿಗೆ ಮೌಲಿಕ ಚಿಂತನೆ ಗಳನ್ನು ನೀಡಿದ್ದಕ್ಕಾಗಿ ಧನಪಾಲರವರನ್ನು ಅಭಿನಂದಿಸುವೆ.    
                                 ದಿ:21-04-2020

ಡಾ||ಮೈತ್ರೇಯಿಣಿ.ಗದಿಗೆಪ್ಪಗೌಡರ
    ಸಹಾಯಕ ಪ್ರಾಧ್ಯಾಪಕರು
ಶಾಸ್ತ್ರೀಯ ಕನ್ನಡಭಾಷಾ ಅಧ್ಯಯನ ಸಂಸ್ಥೆ,                        ಸಹಾಯಕ ಕುಲಸಚಿವರು,ಪ್ರಸಾರಾಂಗ
  ರಾಣಿಚನ್ನಮ್ಮವಿಶ್ವವಿದ್ಯಾಲಯ,
           ಬೆಳಗಾವಿ