ವರ್ಷಗಳುರುಳಿ ವರ್ಷಗಳು ಬರುತ್ತಲೇ ಇದೆ,ಮತ್ತೆ ಮೇ1 ಕಾರ್ಮಿಕರ ದಿನ ಬಂದಿದೆ. ತಮ್ಮ ಶ್ರಮಯೋಗ ಅನುದಾನದಿಂದ ನಮ್ಮೆಲ್ಲರ ಬದುಕು ಹಸನುಗೊಳಿಸುವ, ಸಹನೀಯ ಮಾಡಿಸುವ ಎಲ್ಲಾ ಕಾರ್ಮಿಕ ಬಂಧುಗಳಿಗೂ ಕೃತಜ್ಞತಾಪೂರ್ವಕ ವಂದನೆ ಗಳು, ಅಭಿನಂದನೆಗಳು.
ಕಾರ್ಮಿಕರೆಂದರೆ ಸಂಘಟಿತ ವರ್ಗದ ನೀಲಿಯ ಕಾಲರಿನ ಉದ್ಯೋಗಿಗಳು ಅಥವಾ ಕಾರ್ಖಾನೆಗಳಲ್ಲಿ ದುಡಿಯುವ ಕಾರ್ಮಿಕ ವರ್ಗ ಮಾತ್ರವಲ್ಲ, ಅಸಂಘಟಿತ ವರ್ಗದಲ್ಲಿ ನಮ್ಮ ದಿನನಿತ್ಯದ ಒಳಿತಿಗಾಗಿ ದುಡಿಯುವವರ ದೊಡ್ಡ ಪಟ್ಟಿಯೇ ಇದೆ. ಸಾಮಾನ್ಯ ಅವರ ಹೆಸರುಗಳೂ ತಿಳಿಯದಿ ರುವುದು ನಮ್ಮ ಸಹಜ ಅಹಂಕಾರವೋ ಅಥವಾಉದ್ದೇಶಿತ ನಿರ್ಲಕ್ಷ್ಯವೋ ತಿಳಿದಿಲ್ಲ.
ನಮ್ಮ ಜೀವನ ಸುಗಮ ಸುಲಲಿತವಾಗಲು ಎಷ್ಟೋ ಅನಾಮಿಕ ಕಾರ್ಮಿಕರ ಕೊಡುಗೆ ಯೇ ಕಾರಣ. ಅಂಥವರ ಸಂಖ್ಯೆ ಹೆಚ್ಚು. ಮೊದಲು ಬೀದಿ ಗುಡಿಸಲು ಬರುತ್ತಿದ್ದ ಪೌರಕಾರ್ಮಿಕರು ಈಗ ಕಸ ತೆಗೆದುಕೊಂಡು ಹೋಗಲು ಬರುವವರು,ಮನೆ ಕೆಲಸಕ್ಕೆ ಸಹಾಯಕರಾಗಿ ಬರುವವರು,ಕೂಲಿಕಾರ್ಮಿ ಕರು ತೋಟದ ಮಾಲಿಗಳು, ಚಪ್ಪಲಿ ಹೊಲಿ ಯುವವರು ಹೀಗೆ ಅಸಂಘಟಿತ ಕಾರ್ಮಿ ಕರೇ ಬಹಳ.ಆದರೆ ಕೆಲವರುಮಾತ್ರ ನಮ್ಮ ನೆನಪಿನಂಗಳದಲ್ಲಿ ಸದಾ ಹಸಿರಾಗಿ ಉಳಿದಿ ರುತ್ತಾರೆ.ಏನೋ ಒಂದು ತರಹ ಹೊಸಬರು ಹೊಸತನ ಅಂತ ಅನ್ನಿಸಿದರೂ ಕೆಲವೊಮ್ಮೆ ಆಗ ಅದರ ಮಹತ್ವ ಅರ್ಥವಾಗಿರುವುದಿಲ್ಲ. ಈಗ ಜೀವನದ ಹಲವಾರು ಮಜಲುಗಳನ್ನ ದಾಟಿ ಬಂದು ನಿಂತು ನೆನಪಿಸಿಕೊಂಡಾಗ ಅವರೆಂತ ವಿಶಿಷ್ಟ ಎನಿಸುತ್ತಾರೆ. ಆಗ ನಮಗೇಕೆ ಅರ್ಥವಾಗಲಿಲ್ಲ ಎಂದೆನಿಸುತ್ತದೆ. ಅಂತಹವರಲ್ಲಿ ಒಬ್ಬಳು ನಾಗಿ.
ಇವತ್ತು ನಿಮ್ಮೊಂದಿಗೆ ನಾಗಿಯ ನೆನಪು ಗಳನ್ನು ಹಂಚಿಕೊಳ್ಳುತ್ತೇನೆ.ಆಗ ಎಪ್ಪತ್ತರ ದಶಕ .ಮನೆಯ ಶೌಚಾಲಯಗಳನ್ನು ತೊಳೆ ಯಲು ಬೇರೆಯೇ ಕರ್ಮಚಾರಿಗಳು ಬರು ತ್ತಿದ್ದರು. ಆಗೆಲ್ಲ ಶೌಚಾಲಯಗಳು ಅಂಗಳ ದಲ್ಲಿ ಹೊರಗಡೆ ಇರುತ್ತಿದ್ದವು. ವಿಶ್ವೇಶ್ವರ ನಗರದ ನಮ್ಮ ಆ ಮನೆಯಲ್ಲಿ ಈ ಕೆಲಸಕ್ಕೆ ಬರುತ್ತಿದ್ದವಳು ನಾಗಿ.
ಕಪ್ಪು ಬಣ್ಣದವಳಾದರೂ ಲಕ್ಷಣವಾಗಿದ್ದ ಆಕೆ ಏಕೋ ನನ್ನ ಮನಸ್ಸಿನಲ್ಲಿ ಅಚ್ಚಳಿ ಯದ ನೆನಪಾಗಿದ್ದಾಳೆ. ಕಾಫಿಯ ಹುಚ್ಚಿದ್ದ ಅವಳು ಒಂದು ರೂಪಾಯಿ ಕಡಿಮೆ ಬೇಕಾದರೂ ಕೊಡಿ ದಿನ ಕಾಫಿ ಮಾತ್ರ ಕೊಟ್ಬುಡಿ ಎನ್ನುತ್ತಿದ್ದುದು, ಬಂದ ಕನ್ನಡ ಸಿನಿಮಾಗಳನ್ನು ಬಿಡದೆ ನೋಡುತ್ತಿದ್ದ ಅವಳ ಉತ್ಸಾಹ ಮತ್ತು ಆ ನಾಯಕಿಯ ಕಷ್ಟದ ಮುಂದೆ ತನ್ನದು ಏನೂ ಇಲ್ಲ ಎಂದು ಸಮಾಧಾನಿಸಿ ಕೊಳ್ಳುತ್ತಿದ್ದುದು. ಎಲ್ಲಕ್ಕಿಂತ ಹೆಚ್ಚು ಎನ್ನಿಸುವುದು ಕಥೆಯೆಂದರೆ ಅವಳಿ ಗಿದ್ದ ಪ್ರೀತಿ.ಅವಳೇ ಹೇಳಿದಂತೆ ಚಾಮರಾಜ ನಗರದ.ಕಡೆಯವಳಾದ ಅವಳು ವಯಸ್ಸಾ ದ ಗಂಡನ್ನು ಮದುವೆಯಾಗಲು ಒಪ್ಪದೇ ಪ್ರೀತಿಸಿದ ಈ ಹುಡುಗನ ಜೊತೆ ಓಡಿ ಬಂದಿ ದ್ದಂತೆ.ರಾತ್ರಿಯೆಲ್ಲಾ ಕುಡಿದು ಗಲಾಟೆಮಾಡಿ ಹೊಡೆದು ಬಡಿದರೂ”ಬಿಡಿಯಮ್ಮಾಇದೆಲ್ಲ ನಮ್ಮಲ್ಲಿ ಇದ್ದದ್ದೇ.ಕುಡಿಯದಿದ್ದಾಗ ಅವನು ತುಂಬಾ ಒಳ್ಳೆಯವನು” ಎಂದು ಗಂಡನನ್ನು ವಹಿಸಿ ಕೊಳ್ಳುತ್ತಿದ್ದಳು.
“ಚಿಕ್ಕಮ್ಮರೇ ನಾಳೆ ಸಿನಿಮಾಗೆ ಹೋಗ್ಬೇಕು ನನಗೊಂದಿಷ್ಟು ಹೂವು ಕೊಡಿ ಆಯ್ತಾ” ಅಂತ ನಮ್ಮ ಮನೆಯಲ್ಲಿ ಬಿಟ್ಟಿದ್ದ ಯಾವುದೇ ಹೂವನ್ನೇ ಆಗಲಿ ಕೇಳಿ ತೆಗೆದುಕೊಂಡು ಹೋಗುತ್ತಿ ದ್ದಳು. ಅವಳ ವ್ಯಕ್ತಿತ್ವ ಎಷ್ಟು ವಿಶಿಷ್ಟ ಎಂದು ಈಗ ಅರ್ಥವಾಗುತ್ತಿದೆ.ಅತ್ತು ಕರೆದು ಮಗ ನನ್ನು ಶಾಲೆಗೆ ಕಳುಹಿಸಿ ಎಸ್ಸೆಸ್ಸೆಲ್ಸಿ ಪಾಸಾಗು ವಂತೆಮಾಡಿ ಸರಕಾರಿ ನೌಕರರಿಗೆ ಸೇರಿಸಿದ ಹೆಗ್ಗಳಿಕೆ ಅವಳದು.ಮಗಳು ಮಾತ್ರ ಅವಳ ನಿರೀಕ್ಷೆಗೆ ತಕ್ಕಂತೆ ಓದಲಿಲ್ಲ. ಮನೆಯವರ ವಿರೋಧದ ಮಧ್ಯೆಯೂ ಎರಡೇ ಮಕ್ಕಳಿಗೆ ಸಂತಾನ ಹರಣ ಶಸ್ತ್ರಚಿಕಿತ್ಸೆ ಮಾಡಿಸಿ ಕೊಂಡಿದ್ದಳು. ತಾನು ಎಷ್ಟೇ ಆರ್ಥಿಕ ಕಷ್ಟ ದಲ್ಲಿದ್ದರೂ ತನಗಿಂತ ಕಷ್ಟದಲ್ಲಿರುವವರಿಗೆ ಕೈಲಾದಷ್ಟು ಕೊಡುತ್ತಿದ್ದಳು “ಬಡವರಿಗೆ ಬಡವರೇ ತಾನೇ ಆಗಬೇಕು” ಅನ್ನೋದು ಅವಳ ಡೈಲಾಗು.
ಎಷ್ಟೇ ಕಷ್ಟವಿದ್ದರೂ ಮಕ್ಕಳ ಏಳಿಗೆಗೆ ದುಡಿ ಯುವ ತಾಯಿ, ಪ್ರೀತಿಯಿಂದ ಗಂಡನನ್ನು ವಹಿಸಿಟ್ಟುಕೊಳ್ಳುವ ಪ್ರೇಮಮಯಿ’ಅದಮ್ಯ ಜೀವನೋತ್ಸಾಹದ ಕಾರಂಜಿ ಎಂದೆಲ್ಲಾಈಗ ಅನ್ನಿಸುತ್ತದೆ. ಆಗ ಅರ್ಥ ವಾಗದ ವಯಸ್ಸು ಆದರೂ ಅವಳಂತಿನ ಇತರರಿಗಿಂತ ಅವಳು ವಿಭಿನ್ನ ಎಂದು ಮಾತ್ರ ಅನ್ನಿಸಿತ್ತು. ಇನ್ನೂ ಬೇಕು ಬೇಕುಗಳ ಹಪಾಹಪಿಯಲ್ಲಿರುವ ಇಂದಿನವರ ಮಧ್ಯೆ ಅವಳು ವಿಶಿಷ್ಟ ಎಂದು ನಿಮಗೂ ಅನ್ನಿಸುವುದಿಲ್ಲವೇ ಹೇಳಿ? ಸ್ವಲ್ಪ ಮಾತ್ರ ಕಷ್ಟವನ್ನೂ ಗುಡ್ಡವನ್ನಾಗಿಸಿ ಕೊರಗಿ ಬಿಪಿಶುಗರ್ ಬರಿಸಿಕೊಳ್ಳುವ ನಮ್ಮ ಇಂದಿನ ಜನಾಂಗಕ್ಕೆ ಎಷ್ಟೇಕಷ್ಟವಿದ್ದರೂ ನಗುನಗುತ್ತ ಜೀವನದ ಸಣ್ಣ ಸಣ್ಣ ವಿಷಯಗಳಲ್ಲೂ ಖುಷಿಕಾಣುತ್ತಾ ನೋವನ್ನು ಮರೆಯುತ್ತಿದ್ದೆ. ಇಂತಹವರು ಉದಾಹರಣೆಆಗಬೇಕಲ್ಲವೇ? ಒಳ್ಳೆಯದು ಯಾರಲ್ಲೇ ಇರಲಿ ಗೌರವಿಸಿ ಅನುಕರಿಸುವುದು ನಮ್ಮ ಅಭ್ಯಾಸ ಆಗ ಬೇಕು ತಾನೆ?
🔆🔆🔆
✍️ಸುಜಾತಾ ರವೀಶ್, ಮೈಸೂರು
ಸುಂದರ ಅರ್ಥ ಪೂರ್ಣ ಲೇಖನ ಎಷ್ಟೋ ನಂಬಿಕೆ ವಿಶ್ವಾಸ ಇದ್ದರೆ ಮನೆಯಲ್ಲಿಮನೆ ಹೊರಗೆ ಕೆಲಸ ಮಾಡಲು ಅವರಿಗೆ ಸ್ಥಾನಕೊಡುತ್ತೇವೇ.ಕಾರ್ಮಿಕರು ಶುದ್ಧ ವ್ಯಕ್ತಿತ್ವ ಉಳ್ಳವರಾಗಿದ್ದಾರೆ. ತನ್ನನಂಬಿದವರಿಗೋಸ್ಕರ ಪ್ರಾಣ ಕೊಡಕ್ಕೂ ಸಿದ್ದವಾಗಿರತಾರೆ.ಕಷ್ಟ ಬಲ್ಲವಾರಗಿದ್ದರಿಂದ ಕಷ್ಟದಲ್ಲಿರುವ ಮತ್ತ್ತೊಂದು ಕಷ್ಟಕ್ಕೆ ಸಹಾಯ ಹಸ್ತ ನೀಡುವ ನಿಸ್ವಾರ್ಥಿಗಳು ಆಗಿರುತ್ತಾರೆ.ಯಾರನ್ನು ಕೀಳುಬಾವನೆಯಿಂದ ನೋಡಬಾರದು ಎಲ್ಲರಿಗೂ ಅವರದೆ ಆದ ವ್ಯಕ್ತಿತ್ವ ಇರುತ್ತೆ ಎಂದು ಸಾರುವ ನಿಮ್ಮ ಲೇಖನ ಅಮೋಘ ❤👌🙏
@R.ಸಾವಿತ್ರಿ ✍️
LikeLiked by 1 person
ಪ್ರಕಟಿಸಿದ್ದಕ್ಕಾಗಿ ತುಂಬಾ ಧನ್ಯವಾದಗಳು ಸಂಪಾದಕರಿಗೆ.
ಸುಜಾತಾ ರವಿೊಶ್
LikeLiked by 1 person