ಅವನು ಈಗೀಗ ಮರೆತಂತೆ
ಬೇರೆ ಕಡೆಗೆಲ್ಲ ಬೆರೆತಂತೆ
ಕೈಯಿಂದಾ ಜಾರುವ ಮುತ್ತಂತೆ
ಭಾಸವಾಗುತ್ತಿದೆ ದೂರ ಸರಿದಂತೆ

ಬುದ್ಧನ ಕಥೆಯಾದರೆ ಭಯ
ನಾ ಯಶೋಧರೆ ಆಗಲಾರೆ
ಆ ಯಶಸ್ಸು ತ್ಯಾಗ ವಿಜಯ
ಕೇಳಲು ಅಷ್ಟೇ ಬಯಸಲಾರೆ

ರಮೆಯೊಂದಿಗೆ ರಾವಣನಂತೆ
ಮಂಡೋಧರಿಯಾಗಿ ಒಪ್ಪಲೇ
ಮನವಾಗದು ಸಾಗರದ ವಿಶಾಲತೆ
ಸೆರಗಿನ ತುದಿಯನ್ನು ಹಂಚಲೇ

ಗುಡಿಯ ದೇವತೆಯಾಗಲಾರೆ
ಪುಸ್ತಕದ ನಾಯಕಿಯಾಗಲಾರೆ
ಮಹಾನ್ ಕೀರಿಟವ ತೊಡಲಾರೆ
ಕೊಡುಗೈಯ ದಾನಿಯಾಗಲಾರೆ

ಒಂದೇ ಜ್ಯೋತಿಯ ಬತ್ತಿಗೆ
ದೀಪವಾಗುವೆನು ಬೆಳಕಿಗೆ
ತೊಟ್ಟು ದುಃಖದ ಒಡವೆಯ
ತೋರಲಾರೆ ಸಡಗರ ತೋರಿಕೆಯ

           🔆🔆🔆

✍️ ರೇಮಾಸಂ(ಡಾ.ರೇಣುಕಾತಾಯಿ. ಎಂ.ಸಂತಬಾ) ಹುಬ್ಬಳ್ಳಿ