ಈ ಇಳೆಯಲಿ ಬದುಕುಗಳು
ತಿನ್ನಲಿರದೆ ಕೊರಗುತ್ತಿರುವುದು
ಹಸಿವಿಂದ ನಲುಗುತ್ತಿರುವುದು..

ಅತಿಯಾಗಿ ಹೊಟ್ಟೆಯಳತೆ ಮೀರಿ
ತಿನ್ನುತ್ತಿರುವ ಹೊಟ್ಟೆಬಾಕರಿಂದಲ್ಲ
ಇತಿಮಿತಿಗಳ ಪರಿವೆಯೇ ಇಲ್ಲದೆ
ಕೊಳ್ಳುತ್ತಿರುವ ಕೊಳ್ಳುಬಾಕರಿಂದ.!

ಅದೆಷ್ಟೋ ಕೋಟಿ ಒಡಲುಗಳು
ಆಹಾರವಿಲ್ಲದೆ ನರಳುತ್ತಿರುವುದು
ಉಪವಾಸದಿ ಸಾಯುತ್ತಿರುವುದು..

ಸದಾ ಹಪಹಪಿಸುತ್ತ ಬಾಯ್ಬಿಟ್ಟು
ತಿನ್ನುತ್ತಿರುವ ಬಕಾಸುರರಿಂದಲ್ಲ
ತಲೆಮಾರಿಗಾಗುವಷ್ಟು ಮುಚ್ಚಿಟ್ಟು
ಕೊಳೆಸುತ್ತಿರುವ ದಗಾಕೋರರಿಂದ.!

ಹಸಿದ ತಟ್ಟೆಗೆ ಕಂಟಕವಾದವರು
ಬಡವರ ಬುತ್ತಿಗೆ ಬೆಂಕಿಯಾದವರು
ತಿನ್ನುಹುಚ್ಚಿನ ದೊಡ್ಡಹೊಟ್ಟೆಯವರಲ್ಲ
ಕೂಡಿಡುವ ಕಿಚ್ಚಿನ ದುಷ್ಟತಲೆಯವರು.!

         🔆🔆🔆

✍️ ಎ.ಎನ್.ರಮೇಶ್. ಗುಬ್ಬಿ,