ಕಾಮವು ಕ್ಷಣಿಕ ಪ್ರೇಮವು ಶಾಶ್ವತ. ಕಾಮವು ದೈಹಿಕ, ಪ್ರೇಮವು ಮಾನಸಿಕ. ನಮ್ಮ ಅಂತರಂಗ ಬಹಿರಂಗ ಶುದ್ಧಿಯಿಂದ ಕಾಮವನ್ನು ನಿಗ್ರಹಿಸಿ ಪ್ರೇಮವನ್ನು ಸಾಕ್ಷಾತ್ಕರಿಸಿಕೊಳ್ಳುವ ಮೂಲಕ ಬದುಕನ್ನು ಕಂಡುಕೊಳ್ಳುವ ಪರಿಯೇ ಕಾಮ ದಹನದ ಹೋಳಿಹಬ್ಬ. ಇದನ್ನು ವಸಂತೋತ್ಸವ, ರಂಗಪಂಚಮಿ, ಫಗ್ವಾ, ಡೋಲ್ ಯಾತ್ರಾ ಎಂಬ ಹೆಸರುಗಳಿಂದ ದೇಶದೆಲ್ಲೆಡೆ ಆಚರಿಸುತ್ತಾರೆ.
ಹೋಳಿ ಹಬ್ಬ ಆಚರಣೆಯ ಬಗ್ಗೆ ಐತಿಹ್ಯಗಳು ದೊರೆತಿವೆ. ವಿಜಯನಗರದ ಅರಸರ ಕಾಲದಲ್ಲಿ ಹಾಗೂ ಅಹಮದ್ ನಗರ, ವಾರ ಮತ್ತು ಬುಂಡಿಯಲ್ಲಿರುವ ಚಿತ್ರಕಲೆಯಲ್ಲಿ ಈ ಹಬ್ಬ ಆಚರಣೆ ಕುರಿತ ಕುರುಹುಗಳುದೊರೆತಿವೆ.ಭಾಗವತ ಪುರಾಣ ಮತ್ತು ವಿಷ್ಣು ಪುರಾಣದಲ್ಲಿಯೂ ಈ ಕುರಿತ ಮಾಹಿತಿ ಉಲ್ಲೇಖವಿದೆ.
ಪಾಲ್ಗುಣ ಹುಣ್ಣಿಮೆಯ ವೇಳೆಗೆ ಗಿಡಮರ ಗಳು ಚಿಗುರಿ ಹೂಗೊಂಚಲು ಮೂಡಿ ಹಸಿರಿನಿಂದ ಕಂಗೊಳಿಸುತ್ತಿರುತ್ತವೆ. ಇದು ವಸಂತನನ್ನು ಸ್ವಾಗತಿಸುವ ಮುನ್ಸೂಚನೆ ಕೂಡ. ಈ ಸಮಯ ರಾಜ ಮಹರಾಜರು ಕೌಮುದಿ ಮಹೋತ್ಸವ ಆಚರಿಸುತ್ತಿದ್ದರು. ಇದು ಶೃಂಗಾರ ರಸಕ್ಕೆ ಪೂರಕ ಕೂಡ. ಆಗ ಸಂಗೀತ ಮತ್ತು ನೃತ್ಯ ನಾಟಕಾಭಿನಯ ರಾಜ ಅರಮನೆಯಲ್ಲಿಏರ್ಪಾಟಾಗುತ್ತಿದ್ದವು ಇದು ಸಾಮೂಹಿಕ ಉತ್ಸವ ರೂಪವನ್ನು ಪಡೆದಿದ್ದಿತು ಎಂಬುದನ್ನು ಇತಿಹಾಸದಿಂದ ತಿಳಿಯಬಹುದು.
ಪೌರಾಣಿಕ ಹಿನ್ನೆಲೆ
ಹೋಳಿ ಹಬ್ಬ ಕುರಿತಂತೆ ಎರಡು ದೃಷ್ಟಾಂತ ಗಳು ಬಳಕೆಯಲ್ಲಿವೆ. ಶಿವರಾತ್ರಿ ಅಮವಾಸ್ಯೆ ಯಿಂದ ಹೋಳಿ ಹುಣ್ಣಿಮೆಗೆ ಹದಿನೈದರಿಂದ ಇಪ್ಪತ್ತು ದಿನಗಳ ಅಂತರ. ಪರಮಾತ್ಮನು ತುಂಗಭದ್ರಾ ನದಿಯ ದಡದಲ್ಲಿ ಇರುವ ಹೇಮಗಿರಿ ಪರ್ವತದ ಶಿಖರದಲ್ಲಿ ತಪಸ್ಸು ಮಾಡುವಾಗ ಅವನ ತಪಸ್ಸನ್ನು ಭಂಗ ಮಾಡಿ ಮದುವೆಯಾಗಲು ಪಾರ್ವತಿಯು ಕಾಮದೇವನಲ್ಲಿ ಮೊರೆ ಹೋಗುತ್ತಾಳೆ. ಆಗ ವಿಷ್ಣುವಿನ ಅಪ್ಪಣೆಯಂತೆ ಕಾಮದೇವನು ತನ್ನ ಸೈನ್ಯ ಸಮೇತ ಶಿವನಿದ್ದ ಸ್ಥಳಕ್ಕೆ ಬಂದು ತನ್ನ ಬಾಣಗಳಿಂದ ತಪೋಭಂಗಗೊಳಿಸು ತ್ತಾನೆ. ಇದರಿಂದ ಕೋಪೆಗೊಂಡ ಶಿವನು ತನ್ನ ಉರಿಗಣ್ಣಿನಿಂದ ಕಾಮನನ್ನು ಸುಟ್ಟು ಭಸ್ಮ ಮಾಡುತ್ತಾನೆ. ಗಂಡನನ್ನು ಕಳೆದು ಕೊಂಡ ರತಿಯನ್ನು ಸಮಾಧಾನಪಡಿಸು ವುದು ಪಾರ್ವತಿಗೆ ಕಷ್ಟವಾಗುತ್ತದೆ. ಆಗ ಪಾರ್ವತಿಯು ಕೂಡ ಘೋರ ತಪಸ್ಸನ್ನಾ ಚರಿಸಿ ಪರಶಿವನನ್ನು ಒಲಿಸಿಕೊಂಡಳಲ್ಲದೇ ಕಾಮನಿಗೆ ಮರುಜನ್ಮ ಕೊಡಿಸುವಳು. ತನ್ನಿಮಿತ್ತ ಹೋಳಿ ಆಚರಣೆ ಬಂದಿದೆ ಎಂಬುದು ಪ್ರತೀತಿ.
ಹಿರಣ್ಯಕಶ್ಯಪನ ತಂಗಿ ಹೋಲಿಕಾ ತನಗೆ ಬೆಂಕಿಯಿಂದ ಮರಣ ಬರಬಾರದೆಂದು ವರ ಪಡೆದಿದ್ದಳು. ಇದನ್ನು ಹಿರಣ್ಯಕಶಿಪು ತನ್ನ ಮಗ ಪ್ರಹ್ಲಾದನನ್ನು ಪರಿವರ್ತಿಸಲು ಎಲ್ಲ ಪ್ರಯತ್ನಗಳನ್ನು ಮಾಡಿ ಸೋತಾಗ ತನ್ನ ತಂಗಿಯ ತೊಡೆಯ ಮೇಲೆ ಕುಳ್ಳಿರಿಸಿ ಸುತ್ತಲೂ ಅಗ್ನಿಯನ್ನು ಉರಿಸಲು ಆ ಅಗ್ನಿಯಲ್ಲಿ ಹೋಲಿಕಾ ತನ್ನ ರಾಕ್ಷಸೀ ಪ್ರವೃತ್ತಿಯಿಂದ ಆಹುತಿಯಾಗುತ್ತಾಳೆ. ತನ್ನ ಭಕ್ತಿಯಿಂದ ಪ್ರಹ್ಲಾದ ಭಗವಂತನಿಂದ ರಕ್ಷಿಸಲ್ಪಡುವನು. ಅವಳ ನೆನಪಿಗೆ ಹೋಲಿ ಹಬ್ಬ ಆಚರಣೆ ಬಂತೆಂದು ಹೇಳುವರು.
ಗ್ರಾಮೀಣ ಭಾಗದಲ್ಲಿ ಹೋಳಿ ಹಬ್ಬ
ಕಾಮನ ಪ್ರತಿಷ್ಠಾಪನೆ ಗ್ರಾಮೀಣ ಪ್ರದೇಶದಲ್ಲಿ ಬಹಳ ವಿಜೃಂಭಣೆಯಿ0ದ ಜರುಗುತ್ತದೆ. ಊರಿನ ಪ್ರತಿ ಓಣಿ (ಗಲ್ಲಿಗಳಲ್ಲಿ)ಗಳಲ್ಲಿ ಒಂದೊಂದು ನಿಗದಿತ ಸ್ಥಳದಲ್ಲಿ ಕಾಮನ ಕಟ್ಟೆಯೆಂಬ ಸ್ಥಳದಲ್ಲಿ ರತಿಮನ್ಮಥರ. ಮೂರ್ತಿಗಳನ್ನು ಪ್ರತಿಷ್ಠಾ ಪನೆ ಮಾಡುವರು. ಈ ಸಂದರ್ಭ ವಯಸ್ಸಿನ ಬೇಧವಿಲ್ಲದೇ ಹಲಗೆ ಬಾರಿಸುತ್ತ
“ಕಾಮಣ್ಣನ ಕಟ್ಟುವ ಕರಿಬಿದರ ಸವರುತ್ತ,ಕಾಮಣ್ಣಗ ಬಾಸಿಂಗ ಕಟ್ಟುವ ನಮ್ಮ ಕಾಮ ಇನ್ನೆರಡುದಿವಸ ಇರಲಿಲ್ಲೋ ”
ಎಂದು ಲಬೋ ಲಬೋ ಲಬೋ ಎಂದು ಹೊಯ್ಯುಕೊಳ್ಳುವ ಈ ಆಚರಣೆ ನಿಜಕ್ಕೂ ವಿಶಿಷ್ಟವಾದುದು. ಇಲ್ಲಿ ಅಶ್ಲೀಲತೆಯಂಥಹ ಪದಗಳು ಬಳಕೆಯಾದರೂ ಕೂಡ ಕಾಮ ಮತ್ತು ರತಿಯರ ಸ್ವಭಾವ ಗುಣಗಳನ್ನು ಹೊಗಳುತ್ತ ಗಂಡು- ಹೆಣ್ಣು ವೇಷ ಧರಿಸಿ ಸವಾಲ್-ಜವಾಬ್ ರೀತಿ ಪದಗಳನ್ನು ಹೇಳುತ್ತ ಖುಷಿಯಿಂದ ಗಂಡಸರು ಆಚರಿಸುವ ಈ. ಹೋಳಿ ಕಾಮನನ್ನು ಕೂಡ್ರಿಸಿ ಮನೆಯಲ್ಲಿ ಸಿಹಿ ಅಡುಗೆ ಮಾಡಿ ನೈವೇದ್ಯ ಮಾಡಿ ಮರುದಿನ ಕಟ್ಟಿಗೆಯ ಮೇಲೆ ಕಾಮನನ್ನು ಕುಳ್ಳಿರಿಸಿ ದಹನ ಮಾಡುವ ಮೂಲಕ ಹಬ್ಬ ಆಚರಣೆ ವಿಶಿಷ್ಟವಾದುದು.
ಇಂಥ ಸಂದರ್ಭ ಕಾಮನನ್ನು ಸುಟ್ಟ ಬೆಂಕಿಯ ಕೆಂಡವನ್ನು ಕೆಲವು ಜನ ತಮ್ಮ ಮನೆಗೆ ತರುತ್ತಾರೆ. ಕಾರಣವಿಷ್ಟೇ ಆ ಕೆಂಡ ದಿಂದ ಮನೆಯ ಒಲೆಯನ್ನು ಹೊತ್ತಿಸಿದರೆ ವರ್ಷದುದ್ದಕ್ಕೂ ಅವರ ಮನೆ ಅಡುಗೆ ಹುಲುಸಾಗುತ್ತದೆ ಎಂಬ ನಂಬಿಕೆ. ಅಷ್ಟೇ ಅಲ್ಲ ಆ ದಿನ ಹೋಳಿಗೆ ಮಾಡುತ್ತಾರೆ ಅದನ್ನು ಹೆಂಗಸರು ಹೇಳುವ ರೀತಿ ಹೀಗಿದೆ “ ಹೊಯ್ಕೊಂಡ ಬಾಯಿಗೆ ಹೋಳಿಗೆ- ತುಪ್ಪ” ಎಂದು ಚೇಷ್ಟೆ ಮಾಡಿ ಉಣಬಡಿ ಸುವರು. ಇನ್ನೂ ಕೆಲವರು ಈ ಕಾಮನ ಬೆಂಕಿಯಲ್ಲಿ ಕಡಲೆ ಹುರಿದುಕೊಳ್ಳುವರು. ಈ ಕಡಲೆ ತಿಂದರೆ ಬಾಯಿಯಲ್ಲಿನ ಹಲ್ಲುಗಳು ಗಟ್ಟಿಯಾಗುತ್ತವೆ ಎಂಬ ನಂಬಿಕೆ. ಕಾಮನ ಬೂದಿಯನ್ನು ಮನೆಗೆ ಒಯ್ದು ಆ ವರ್ಷದ ಮೊದಲ ಮಳೆಯ ನಂತರ ಬಿತ್ತುವ ಬೀಜದಲ್ಲಿ ಆ ಬೂದಿ ಯನ್ನು ಬೆರೆಸಿ ಬಿತ್ತನೆ ಮಾಡಿದರೆ ಬೆಳೆ ಚನ್ನಾಗಿ ಬರುತ್ತದೆ ಎಂಬ ಪ್ರತೀತಿ ಇದೆ.
ಕಾಮದಹನ ಸಂದರ್ಭ ತೆಂಗಿನ ಕಾಯಿ ಯನ್ನು ಕಾಮನ ತಲೆಯನ್ನು ಗುರಿಯಾಗಿಸಿ ಕೊಂಡು ಎಸೆಯುವರು. ಆಗ ಅವನ ರುಂಡವು ಯಾವ ದಿಕ್ಕಿನತ್ತ ಬೀಳುತ್ತದೆಯೊ ಆ ದಿಕ್ಕಿನಲ್ಲಿ ಮಳೆ-ಬೆಳೆ ಬಹಳ ಆಗುತ್ತದೆ ಎನ್ನುವುದು ವಾಡಿಕೆ. ಕಾಮ ಸತ್ತ ಐದು ದಿನಕ್ಕೆ ಮಳೆಯಾಗುತ್ತದೆ. ಅದು ಕಾಮಣ್ಣನ ಬೂದಿ ತೋಯಿಸುತ್ತದೆ. ಅದು ಕಾಮನ ಕಣ್ಣೀರು ಎಂಬುದು ಗ್ರಾಮೀಣ ಜನರ ನಂಬಿಕೆ
ಕಾಮನನ್ನು ಸುಟ್ಟು ಅವನ ಬೂದಿಯನ್ನು ವಿಭೂತಿಯಂತೆ ಹಣೆಗೆ ಧರಿಸುವುದು ಕೂಡ ಮನದಕೆಟ್ಟ ಕಾಮವನ್ನು ಜ್ಞಾನಚಕ್ಷುವಿನಿಂದ ಸುಟ್ಟು ಬೊಟ್ಟಿಡುವುದು ಶಿವನ ಸಾಕ್ಷಾತ್ಕಾರದ ಸಾಧನ. ನಮ್ಮಆಸೆ ಆಕಾಂಕ್ಷೆ ಗಳಲ್ಲಿ ಧರ್ಮಸೂಕ್ಷ್ಮ ದರ್ಶನ ಕಾಣ್ಕೆಯಿದ್ದು ಅಂತರಂಗ ಮತ್ತು ಬಹಿರಂಗ ಶುದ್ಧಿಯಿಂದ ಶರೀರ ಪವಿತ್ರತೆಯನ್ನು ಪಡೆಯಬೇಕು. ಇದು ವಿಭೂತಿ ಧಾರಣೆಯ ಮೂಲಕ ಆಗಬೇಕು.ಅದು ಕಾಮದಹನದ ಮೂಲಕ. ಶಿವನ ಹಣೆ ಎಂದರೆ ಜ್ಞಾನ ಚಕ್ಷು. ಕಾಮ ಎಂದರೆ ಕೆಟ್ಟ ಆಸೆ. ಕೆಟ್ಟ ಆಸೆಯನ್ನು ಜ್ಞಾನ ಚಕ್ಷುವಿನ ಸೂರ್ಯನಿಂದ ಸುಟ್ಟು ಉತ್ತಮ ಸಂಸ್ಕಾರ ಹೊಂದುವುದಾಗಿದೆ. ಕಾಮ ದೇವನ ಪ್ರತಿಕೃತಿ ದಹಿಸಿ,ಕೆಟ್ಟಕಾಮನ ಗೆಳನ್ನು ತ್ಯಜಿಸುವ ಮತ್ತು ಸತ್ ಕಾಮನೆ ಗಳನ್ನು ಪೋಷಿಸಿಕೊಳ್ಳುವ ಸಂಕಲ್ಪ ತೊಡ ಬೇಕು.
ಕಾಮ ಎಂದರೆ ಬಯಕೆ. ಕಾಮ ಸೃಷ್ಟಿಯ ಆದಿಮೂಲ. ಒಂಟಿಯಾಗಿದ್ದ ಸತ್ ಅಥವ ಪರಬ್ರಹ್ಮವು “ನಾನು ಒಬ್ಬನೇ ಇದ್ದೇನೆ. ಅನೇಕವಾಗಿ ವಿಸ್ತರಣೆಗೊಳ್ಳುತ್ತೇನೆ” ಎಂಬ ಕಾಮನೆ ತಳೆದಾಗ ಸೃಷ್ಟಿ ಪ್ರಕ್ರಿಯೆ ಆರಂಭಗೊಂಡಿತು.ಕಾಮದೇವನ ವಾಹನ ಪಂಚರಂಗಿ ಗಿಳಿ. ಕಾಮದೇವ ತನ್ನ ಕಬ್ಬಿನ ಜಲ್ಲೆಯ ಬಿಲ್ಲಿಗೆ ಐದು ಬಗೆಯ ಹೂ ಬಾಣ ಗಳನ್ನು ಹೂಡುತ್ತಾನೆ ಎಂಬುದು ಪ್ರತೀತಿ. ಕಮಲ, ಅಶೋಕ, ಮಲ್ಲಿಗೆ, ನೈದಿಲೇ ಮತ್ತು ಮಾವು ಇವು ಐದು ಬಾಣಗಳು. ಇವು ಸಮ್ಮೋಹನ, ಸಂತಾಪನ, ಸಂದೀಪನ, ಸಂಶೋಷಣ ಮತ್ತು ದ್ರಾವಣ ಎಂಬ 5 ಬಗೆಯ ಪರಿಣಾಮ ಗಳನ್ನು ಉಂಟು ಮಾಡುತ್ತವೆ. ರತಿ ಮತ್ತು ಪ್ರೀತಿ ಇವರು ಕಾಮದೇವನ ಪತ್ನಿಯರು. ರತಿ ಬಹಿರಂಗವಾಗಿ ಕಾಣಿಸಿಕೊಂಡರೆ, ಪ್ರೀತಿ ಅವನಲ್ಲಿಯೇ ಸುಪ್ತವಾಗಿರುತ್ತಾಳೆ.
ಕೇವಲ ಯೌವನಭರಿತ ದೇಹ ಕಾಮಾತುರ ಣದಿಂದ ತನ್ನ ಸ್ಥಿತಿಯನ್ನು ಪಡೆದರೆ ಅದು ಪ್ರೇಮವಾಗದು. ಭಾವನಾಪರವಶತೆಯಿಂದ ಆತ್ಮಶ್ರೀಯಿಂದ ಎರಡೂಕಡೆ ಸಮತೋಲಿತ ಪ್ರೇಮ ಒಡಮೂಡಿದಾಗ ಮಾತ್ರ ಅದು ತಪಸ್ಸಿನಂತೆ ಕಂಗೊಳಿಸುವುದು. ಇಲ್ಲಿ ಕೇವಲ ಕಾಮವಿರದೆ ಪ್ರೇಮತ್ವ ಮೂಡಿರು ವುದು. ಇದು ಪಾರ್ವತಿ ಕಾಮನ ಸಹಾಯ ಪಡೆದು ಶಿವನ ಮೋಹಿಸುವ ಪರಿಯನ್ನು ಶಿವ ತನ್ನ ಇಚ್ದೆಯ ವಿರುದ್ಧಪ್ರಕ್ರಿಯೆಯೆಂದು ಪರಿಗಣಿಸಿ ಕಾಮನನ್ನು ಸುಡುವ ಮೂಲಕ ಪಾರ್ವತಿ ತನ್ನ ತಪಸ್ಸಿನ ಮೂಲಕ ಶಿವನೊಲುಮೆ ಪಡೆಯುವಂತೆ ಮಾಡುವು ದಿದೆಯಲ್ಲ ಅಲ್ಲಿ ನಿಷ್ಕಾಮ ಪ್ರೇಮ ಮೂಡುವ ಭಾವನೆ ಆತ್ಮಶ್ರೀಯ ಮೂಲಕ ನಡೆಯುವುದು. ಶಿವನನ್ನು ಸಾಕ್ಷಾತ್ಕರಿಸಿ ಕೊಳ್ಳಲು ನಮ್ಮ ಪ್ರಣಯದ ಆಸೆ ಆಕಾಂಕ್ಷೆ ಗಳನ್ನು ಮೊದಲು ಸುಡಬೇಕು. ಕಾಮವು ಪ್ರೇಮವಾಗಿ ಶಿವರತಿಯಾಗಬೇಕು. ಅಂತರಂಗ ಬಹಿರಂಗ ಶುದ್ದಿಯಿಂದ ಪವಿತ್ರತೆಯುಂಟಾಗಬೇಕು.
🔆🔆🔆
✍️ ಶ್ರೀ ಯಲ್ಲಪ್ಪ ಬಿ.ಕಡಕೋಳ ಶಿಕ್ಷಕರು ಹಾಗೂ ಸಂಪನ್ಮೂಲ ವ್ಯಕ್ತಿಗಳು ಮುನವಳ್ಳಿ
ಹೋಳಿ ಹಬ್ಬದ ಕುರಿತಾದ ಉತ್ತಮ ನಿರೂಪಣೆ. ಕರ್ನಾಟಕದ ಗ್ರಾಮೀಣ ಪ್ರದೇಶದ ಹೋಳಿಯ ವೈಶಿಷ್ಟ್ಯಗಳನ್ನು ಚೆನ್ನಾಗಿ ವಿವರಿಸಿದ್ದೀರಿ. ನಮ್ಮ ಭಾಗಕ್ಕೆ ವಿಶಿಷ್ಟವಾಗಿದ್ದ ಹೋಳಿಯ ಆಚರಣೆ ಉತ್ತರ ಭಾರತದ ಹೋಳಿಯನ್ನು ಅನುಕರಿಸಲು ಹೊರಟಿರುವುದು ದುರದೃಷ್ಟಕರ
LikeLiked by 1 person