ಅಂದು ಅಜ್ಜನ ಜನ್ಮದಿನ
ಅವನಂಗಳದಿ ಮೈ ಮರೆತಿದ್ದೆ.
ನಾಜೂಕಾಗಿ ಬೀಸಿದ ಗಾಳಿಯೊಡನೆ ಹಾರಿದ ತರಗಲೆಗಳಿಗೆ
ಅದ್ಯಾತರದ ಲೋಕನಾದ….
ನೆರೆತ ಭಾವಗಳು
ಹಕ್ಕಿ ಗಿಲಕಿ ಹಿಡಿದನಾದಕ್ಕೆ
ಅಂತರಾಳದಿ ಮೀಟಿದ್ದು ನೀನಾದ….
ಮುಗಿಲ ಮಾರಿಯ ರತಿಯ ರಾಗಕ್ಕೆ
ಅದ್ಯಾವ ಹೊಂಬಣ್ಣ….
ಅಜ್ಜನ ಭಾವದೊಂದಿಗೆ ಬೆಸೆದ ಕೆರೆ,
ಏರಿಯ ಮಣ್ಣಲ್ಲಿ ಅವನದೆ ಹೃದಯಗಣ್ಣು…
ಅಜ್ಜ ಹೂತ ಬೀಜಕ್ಕಿಗ
ಹರೆಯದ ಸಂಭ್ರಮ…
ಒಬ್ಬಂಟಿಯಾಗಿಯೇ
ಅವನಂಗಳದ ಆಲದೊಂದಿಗೆ
ಮೈಮರೆತೆ…
ಅದೇನೋ ನಂಟು ನನ್ನೂರಿನ ರಸಋಷಿ ಭುವನದ ಭಾಗ್ಯ…
ಅನುಮಾನವಿಲ್ಲ ಬಿಗುಮಾನ ಸ್ವಾಭಿಮಾನ ಭುವನಕುಕ್ಷಿಗೆ ಕೈ ಮುಗಿದೆ…..
ಅಂಬಿಕೆಯ ಅಂಕೆಗೂ ನಿಲುಕದ ಸಂಖ್ಯಾಋಷಿ.
ವಿಜ್ಞಾನದ ರೆಂಬೆ ಕೊಂಬೆಗಳಿಗೆ ಗೂಡು ಕಟ್ಟಿದವ.
ಗುಟುಕು ನೀಡಿ ತಾಯಾದವ
ಶ್ರಾವಣದ ಸಮೀರ…
ಬಿಂದು ಕಳಾತೀತ ಅವನ
ಲೀಲೆಯ ನಾದ
ಅಂತರಂಗದ ಮೃದಂಗದಲ್ಲಿ ಸಪ್ತರಾಗದ ಝೆಂಕಾರ…
ಆಳದಲ್ಲಿ ನೆಲಕಚ್ಚಿನಿಂತ ಆ ಮರ.
ಪಾತಾಳದ ಬೇರಿಗೆ ಸವಾಲು.
ಆಕಾಶದೇತ್ತರದ ಅಜ್ಜನ ರೂಹಿನ ಬಿಂಬಕ್ಕೆ ಜ್ಞಾನಸೂರ್ಯನ ಚೆಂಬೆಳಕು….
ಅಜ್ಜ ನನ್ನೊಂದಿಗೆ ಬೆರೆತ, ಅರಿತ.
ಅದೇ ಅಲ್ಲವೇ ಅಜ್ಜನ ಆಲದ ಮರ.
ನನ್ನೂರಿನ ಮಣ್ಣಿಗೆ ಅವಧೂತ ಶಕ್ತಿ ತಂದದ್ದು….
ಅಜ್ಜನ ಅಂಗಳದ ಆಲಕ್ಕೀಗ ಶತಮಾನ..ಅದಕೂ ಅದರದೇ ಆದ ಕಥೆ ವ್ಯಥೆ…
ಹೂತಿಟ್ಟ ಹುಣಸೆ ಬೀಜ,
ಹೀಚಾಗಿ, ಕಾಯಾಗಿ, ಹಣ್ಣಾಗಿ, ಹೆಣ್ಣಾದ ಮಲ್ಲಿಗೆ.
ಘಮ ಘಮಾಡಿಸಿದ ಕಾವ್ಯ ಕನ್ನಿಕೆ…
ನಾನು, ನೀನು ,ಆನು ,ತಾನು,
ತಂತಿಮೀಟಿದ ದತ್ತ.
ಗುರುದೇವನ ಜೋಗುಳದ ಕೂಸು..
ಅಜ್ಜ ಮೀಟಿದ ನಾಕೂ ತಂತಿಗಳು,
ಕಣ್ಣಾಲಿಯ ಸೈರಿಸಲಾದರೆ
ಹುಣ್ಣುಮೆಯ ಚಂದಿರನ ಹೆಣಕ್ಕೆ
ಹೆಗಲಾದ ನೋವು….
ಕಣ್ಣಲ್ಲಿ ಕಾಲೂರಿನಿಂತ ಮುಗಿಲ ಹನಿ
ಅಜ್ಜನ ಆಲಕ್ಕೆ ದೋ ಗಟ್ಟಿ ಸುರಿದ ಕಲ್ಪನಾವಿಲಾಸ….
ಕಲ್ಪಹಾದಿಗುಂಟ ಅರಳಿನಿಂತ
ಗುಲ್ ಮೋಹರಗಳು ಅಜ್ಜನ ಬಳುವಳಿ….
ಆಲದ ಆಶ್ರಯಕ್ಕೆ ಕುಡಿಯೊಡೆದ ಮಾವು..
ಸುಳೆದೆಗೆದ ಬಾಳೆ,
ಹಲವು ಜನ್ಮದ ಸಾಲ ತೀರಿಸಲೆಂದೆ, ಅವನಂಗಳದಿ ಮೀಟುತ್ತಿವೆ ನಾಕುತಂತಿ ಅನೂಚಾನ..
ಬೃಂಗದ ಬೆನ್ನೇರಿದ ಓಂಕಾರನಾದ..
ಶತಮಾನದ ಹಸಿರಿಗೂ, ನನ್ನೂಸಿರಿಗೂ ,
ನೆಲದ ಹೆಸರಿಗೂ ಸವಾಲು. ಔದುಂಬರದ ದೇವದತ್ತ
ನನ್ನಜ್ಜ ಆಲದಮರ.
🔆🔆🔆
✍️ ಡಾ.ಮೈತ್ರೇಯಿಣಿ ಗದಿಗೆಪ್ಪಗೌಡರ
ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿ
ದ.ರಾ. ಬೇಂದ್ರೆಯವರ ಹಲವು ಅರ್ಥಕೊಡುವ ಕವನಗಳಿಗೆ , ಅವರ ಪದಜೋಡಣೆಗೆ ಅವರೇ ಸಾಟಿ. ತುಂಬಾ ಅಪ್ಯಾಯಮಾನವಾಗಿ ಬರೆದಿದ್ದೀರಿ. ಅಭಿನಂದನೆಗಳು
LikeLike
ಅಜ್ಜನವರ ಕವಿತೆ ಚನ್ನಾಗಿದೆ.
LikeLike
ಕವಿತೆಯ ತುಂಬಾ ಅಡ್ಡಾಡಿದ ಆಪ್ತತೆ ಅಜ್ಜನ ಸುತ್ತ ಹರಡಿ ಮನ ಕೆ ಸಂತಸ ದ ಆಪ್ಯಾಯತೆ ತಂದಿದೆ
LikeLiked by 1 person
ಬೇಂದ್ರೆ ಅಜ್ಜನ ಕುರಿತು ಅತ್ಯಂತ ಆತ್ಮೀಯತೆಯಿಂದ ನಮ್ಮ ಮನೆಯ ಅಜ್ಜನೇ ಇವರು ಅನ್ನಿಸುವಂತೆ ಕವನ ಆಪ್ಯಾಯಮಾನವಾಗಿದೆ ಮೇಡಂ. ಸೂಪರ್
LikeLiked by 1 person
ಧನ್ಯವಾದಗಳು ತಮ್ಮ ಆತ್ಮೀಯತೆಗೆ
LikeLiked by 1 person
ಹಳೆಯ ತಲೆಮಾರಿನಿಂದ ಹಿಡಿದು ಹೊಸ ತಲೆಮಾರಿನ ಓದುಗರನ್ನು, ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ ವಿಶ್ವದಾದ್ಯಂತ ಇರುವ ಸಾಹಿತ್ಯಪ್ರೇಮಿ ಕನ್ನಡಿಗರನ್ನು ತಮ್ಮ ಸಾಹಿತ್ಯ ಹಾಗೂ ವ್ಯಕ್ತಿತ್ವದಿಂದ ಪ್ರಭಾವಿಸಿರುವ ಶಬ್ದಗಾರುಡಿಗ ಡಾ. ದ.ರಾ. ಬೇಂದ್ರೆಯವರ ಬಗೆಗೆ ತುಂಬ ಅರ್ಥಪೂರ್ಣ ಕವಿತೆ ಮೇಡಮ್. ಧನ್ಯವಾದಗಳು
LikeLike